Wednesday 23 December 2009

ಬೆಡಗು




ಮೋಡವಿರದೆ ಸೂರ್ಯನ ಇರುವಿಕೆಯೇ?
ಅವನ ಶಾಖವಿಲ್ಲದೆ ಮೋಡದಿಂದ ಮಳೆ ಸಾಧ್ಯವೇ?
ಕಿರಣಗಳಿಲ್ಲದೆ ಬಾನಿನನಲ್ಲಿ ಚಿತ್ತಾರವಿಲ್ಲ,
ಪರಿಧಿಯಿಲ್ಲದ ಬಾನಿಗೆ ಮೋಡಗಳದೇ ಪರದೆ,
ಆ ಪರದೆಯಿಂದಲೇ ಅಪರಿಮಿತಕ್ಕೂ ಪರಿಮಿತಿ.

ಕಿರಣಗಳಿಗೆ ತೂರಿ ಹೋಗುವ ತವಕ,
ಮೋಡಗಳಿಗೋ ನೀರುಣಿಸುವ ಪುಳಕ,
ಭೂಮಿಗೆ ಎರಡರಿಂದಲೂ ಜಳಕ,
ಬಣ್ಣವಿರದ ಬಾನು, ಮೋಡ, ಕಿರಣ,
ಜೊತೆಗೂಡಿ ಮಾಡುವ ಮೋಡಿ
ನೋಡುವ ಕಣ್ಣಿಗೆ ಹಬ್ಬ, ಬೆಡಗು..





Thursday 19 November 2009

ಅವಳು....

ನೀರು ಕೊಟ್ಟ ಬಟ್ಟಲು ಕಂಗಳ ಚೆಲುವೆ
ಯ ಕಣ್ಣ ಮೇಲಿಂದ, ಮೂಗಿನ ಪಕ್ಕ
ದಲ್ಲಿ ಹಾದು ಕೆನ್ನೆಯ ಮೇಲೆ ಬಿದ್ದಂತ
ಮುಂಗುರುಳಿಗೂ, ಕೈಯಲ್ಲಿ ಹಿಡಿದ
ತಂಬಿಗೆಗೂ ಜಗಳ, ಯಾರ ಅದೃಷ್ಟ ಹೆಚೆಂದು.
ಅವಳ ಕೈಯ ಸ್ಪರ್ಶ ಸಿಗದ ತಂಬಿಗೆಯ ನೀರು
ಮಾತ್ರ ತನ್ನ ಸಮಾಧಾನಕ್ಕೆ ಜೋಗದ
ಜಲಪಾತದ ನೀರನ್ನು ಕಂಡು
ಗೆಲುವಿನ ನಗೆ ಬೀರಿತ್ತು.
ನಿನಗಿಂತ ನಾನವಳ ಹತ್ತಿರ ಎಂದು!!!!


Thursday 12 November 2009

ರೇಡಿಯೋ ಬೆಂಗಳೂರು!!!

ಈ ದಶಕದ ಮಾಧ್ಯಮ ವಲಯದಲ್ಲಾದ ಒಂದು ಪ್ರಮುಖ ಬದಲಾವಣೆಯೆಂದರೆ ಎಫ್ ಎಮ್ ರೇಡಿಯೋ. ಈ ಕ್ರಾಂತಿ ಶುರುವಾದಾಗ ಬೆಂಗಳೂರಲ್ಲಿದ್ದ ಎರಡೇ ಚಾನೆಲ್ ಗಳಲ್ಲಿ ಒಂದು 91.1 ರೇಡಿಯೋ ಸಿಟಿ, ಇನ್ನೊಂದು ಆಕಾಶವಾಣಿಯವರ ರೇನ್ ಬೋ. ಮೊದಲನೆಯದು ಬರೀ ಹಿಂದಿ ಸಂಗೀತ ಪ್ರಸಾರಿಸಿದರೆ ಎರಡನೇಯದು ಕನ್ನಡ - ಹಿಂದಿ ಎರಡನ್ನೂ ಪ್ರಸಾರಿಸುತ್ತಿತ್ತು. ಆಫೀಸಿಗೆ ಕಂಪನಿ ಬಸ್ ನಲ್ಲಿ ಪ್ರತಿ ದಿನ ಬೆಳಿಗ್ಗೆ ಒಂಥರಾ ಅಸಹನೀಯವೆನಿಸುವ ವಾತಾವರಣ. ಡ್ರೈವರ್ ಗೆ ಕನ್ನಡ ಬೇಕಿದ್ದರೆ ಕೆಲ ಹೊರಭಾಷಿಕರಿಗೆ ಹಿಂದಿ ಬೇಕಿತ್ತು. ಒಂದೆರೆಡು ವಾರಗಳ ನಂತರ ಡ್ರೈವರ್ ಗೆದ್ದಿದ್ದ!

4 ವರ್ಷಗಳ ನಂತರದ ಈಗಿನ ಬೆಂಗಳೂರು. ಇರುವ 6-7 ರೇಡಿಯೋ ಚಾನೆಲ್ ಗಳಲ್ಲಿ ಒಂದನ್ನು ಬಿಟ್ಟರೆ ಎಲ್ಲವೂ ಕನ್ನಡಮಯ! ಬೇಡಿಕೆ-ಪೂರೈಕೆಗಳ ಮಾರುಕಟ್ಟೆ ವ್ಯವಸ್ಥೆಯ ರೇಡಿಯೋ ಚಾನೆಲ್ ಗಳ ಮ್ಯಾನೇಜ್ ಮೆಂಟ್ ನವರಿಗೆ ಕನ್ನಡದ ಶಕ್ತಿಯ ಪರಿಚಯ ಆಗಿರುವುದು ಸ್ಪಷ್ಟ. ಕನ್ನಡಿಗರ ಅಭಿಮಾನದ ಬಗ್ಗೆ ಪ್ರಶ್ನಿಸುವವರು ಯಾವುದೇ ವೊಲ್ವೋ ಬಸ್ ಹತ್ತಿ ITPB ಗೆ ಹೋಗಿ ಅನುಭವಿಸಬೇಕು. ಎಲ್ಲ ಚಾನೆಲ್ ಗಳವರಿಗೂ ಕನ್ನಡವೇ ಬೇಕು. ರೇಡಿಯೋ ಸಿಟಿ ಇನ್ನೂ ಮಾರುಕಟ್ಟೆಯಲ್ಲಿದೆಯೆಂದರೆ ಕನ್ನಡಕ್ಕೆ ತಿರುಗಿದ್ದೇ ಕಾರಣ.

ಕನ್ನಡ ಪರ ಸಂಘಟನೆಗಳ ಮನವಿಗಳನ್ನು ತಿರಸ್ಕರಿಸಿ, ಬರೀ ಹಿಂದಿ ಹಾಡುಗಳನ್ನು ಕೇಳಿಸುತ್ತಿದ್ದ ರೇಡಿಯೋ ಸಿಟಿ ಅದಕ್ಕೆ ಕೊಟ್ಟ ಕಾರಣ - ಕನ್ನಡ ಹಾಡುಗಳಿಗೆ ಮಾರ್ಕೆಟ್ ಇಲ್ಲ ಎಂಬುದೇ ಆಗಿತ್ತು. ಮನೋ ಮೂರ್ತಿ - ಹರಿಕೃಷ್ಣ - ಕಾಯ್ಕಿಣಿ - ಭಟ್ - ವಿಜಯ್ ಪ್ರಕಾಶ್ - ಸೋನು ನಿಗಮ್ - ಚಿತ್ರಾ - ಶ್ರೇಯಾ - ಮುಂತಾದವರಿಂದ ಒಳ್ಳೆಯ ಹಾಡುಗಳಿಂದಾಗಿ ಈಗ ರೇಡಿಯೋ ತುಂಬೆಲ್ಲ ಕನ್ನಡವನ್ನೇ ಕೇಳಲು ಒಂಥರಾ ಖುಶಿ!!!

Monday 12 October 2009

ಕೊನೆ ಎರಡು ವಾರಗಳು...

ಜನೆವರಿಯಿಂದ ರಿಲೀಸ್ ಕೇಳುತ್ತಿದ್ದೆ. ರಿಸೆಷನ್ ಎಲ್ಲೆಡೆ ತನ್ನ ಪ್ರಭಾವ ಬೀರಿದ್ದರೂ ನನ್ನ ಟೀಮಿನಲ್ಲಿ ನಾನೇ ರಾಜ! ಯಾರೂ ಬರಲೊಪ್ಪದ ಇಲ್ಲಿನ ಟೀಮ್ ಸೇರಿ ಸಮರ್ಥವಾಗಿ (? :) ) ಕೆಲಸ ನಿಭಾಯಿಸಿದ್ದಕ್ಕೋ, ನಾನು ಹೇಳಿದ್ದನ್ನು ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ಮ್ಯಾನೇಜರ್ ಇರಲಿಲ್ಲ. ಸರಿ, ಟೀಮ್ ನಲ್ಲೇ ಉಳಿಬೇಕಾದರೆ ಉಳಿದಿದ್ದೊಂದೆ ದಾರಿ -ವಾಪಸ್ ಅಮೇರಿಕದ ಹಾದಿ ಹಿಡಿಯಬೇಕು. ಬಂದ ದಿನದಿಂದಲೂ ಲಂಡನ್ ಹಿಡಿಸಿರಲಿಲ್ಲ - ಹವಾಮಾನ ಒಂದು ಕಡೆ, ಮೂರೇ ಜನರ ಟೀಮ್ ನಲ್ಲಿ ಕೆಲಸದ ಜೊತೆಗೆ ೮೦ ಲಕ್ಷ ಜನರಿರುವ ಊರಲ್ಲಿ ಪರಿಚಯದವರಿಲ್ಲದಿರುವುದೂ ಕಾರಣವಾಗಿತ್ತು. ಸರಿ ಮೇನಲ್ಲಿ ವಾಪಸ್ ಹೋಗುವುದೆಂದು ನಿಶ್ಚಯವಾಯಿತು. ಆದರೆ ರಿಸೆಷನ್ ತನ್ನ ಪ್ರಭಾವ ಬೀರೇ ಬಿಟ್ಟಿತ್ತು. ಬಜೆಟ್ ಇಲ್ಲ ಎಂಬ ಕಾರಣದಿಂದ ನನ್ನ ಅಮೆರಿಕ ಪ್ರಯಾಣ ರದ್ದಾಯಿತು. ಆದರೆ ಅದರ ಜೊತೆಗೆ ಒಂದು ಆಶಾಕಿರಣವೂ ಬೆಳೆಗಿತು!! ಮ್ಯಾನೇಜರ್ ತಾನಾಗೇ ನನ್ನ ಮುಂದಿನ ಪ್ಲ್ಯಾನ್ ಕೇಳಿದಾಗ ಊರಿಗೆ ಮರಳುವ ಪ್ರಸ್ತಾಪ ಮುಂದಿಟ್ಟೆ. ಒಪ್ಪಿಗೆ ಸಿಕ್ಕಿತ್ತು. ಜುಲೈ ಕೊನೆಗೆ ಹೋಗುವುದು ಪಾಸಿಬಲ್ ಅನ್ನಿಸಿತ್ತು. ಆದರೆ ಮ್ಯಾನೇಜರ್ ಸೆಪ್ಟೆಂಬರ್ ಕೊನೆಗೆ ಎಂದ. ಸರಿ, ಇನ್ನೇನು ಎರಡು ತಿಂಗಳ ಮಾತೇ ತಾನೆ ಎಂದು ಸರಿ ಎಂದಿದ್ದೆ.

ಮಧ್ಯೆ ಮತ್ತೇನೋ ಬಂದು ಕೊನೆಗೆ ಅಕ್ಟೋಬರ್ ಕೊನೆ ಎಂದಾಗ ಮತ್ತಷ್ಟು ಗಟ್ಟಿ ಮಾಡಿ ಸರಿ ಎಂದೆ. ಇನ್ನೇನು ಎರಡು ವಾರಕ್ಕೆ ಮರಳುತ್ತಿರುವೆ. ಅದೇಕೋ ಅಮೆರಿಕೆಯಿಂದ ಹೊರಟ ಸಮಯ ನೆನಪಿಗೆ ಬಂತು.
ಮೇ ೦೭ ನಲ್ಲಿ ಅದೇ ತಾನೆ ಅಣ್ಣನ ಮದುವೆ ಮುಗಿಸಿ ಮರಳಿ ಅಮೇರಿಕಕ್ಕೆ ತೆರೆಳಿದ್ದೆ. ಇನ್ನೂ ಬಂದು ಒಂದು ವಾರ ಆಗಿರಲಿಲ್ಲ, ಮ್ಯಾನೇಜರ್ ಕರೆದರು. ಅದೇ ತಾನೆ ಕಾಸ್ಟ್ ಕಟಿಂಗ್ ಎಂದು ಹತ್ತಿಪ್ಪತ್ತು ಪರ್ಸೆಂಟ್ ಜನರನ್ನ ಹೊರಗೆ ಕಳಿಸಿದ್ದರು. ನನ್ನ ಟೀಮ್ ಬೇರೆ ಬದಲಾಯಿಸಿದ್ದರು. ಇದೇನಪ್ಪ ಈಗ ಮತ್ತೊಮ್ಮೆ ಮೀಟಿಂಗ್ ಎಂದು ಹೋದರೆ, ಪಾಸ್ ಪೋರ್ಟ್ ಮತ್ತೆ ಇತರೆ ದಾಖಲೆ ಕಳಿಸಲು ಹೇಳಿದರು. ಯಾಕೆ ಎನ್ನಲು, ಲಂಡನ್ ನಲ್ಲಿರುವ ಟೀಮಿಗೆ ನಿನ್ನ ಅವಶ್ಯಕತೆ ಇದೆ, ಇನ್ನೊಂದು ತಿಂಗಳಲ್ಲಿ ಹೊರಡಬೇಕು ಎಂದಾಗ, ಸ್ವಲ್ಪ ಖುಷಿ, ಸ್ವಲ್ಪ ಕಸಿವಿಸಿಯಾಗಿತ್ತು. ಎರಡೇ ತಿಂಗಳಿಗೆ ಮತ್ತೆ ಊರಿಗೆ ಬರುವ ಅವಕಾಶ ಒಂದು ಕಡೆ ಆದರೆ, ತಿಳವಳ್ಳಿಯ ತರಹವೇ ಇದ್ದ ಆ ಊರನ್ನು ಮತ್ತು ಉಳಿದ ಸವಲತ್ತುಗಳನ್ನು ಬಿಟ್ಟು ಬರಬೇಕೆನ್ನುವ ನಿರಾಶೆ ಇನ್ನೊಂದು ಕಡೆ. ಈ ದ್ವಂದ್ವದಲ್ಲೇ ಒಂದು ತಿಂಗಳು ಕಳೆದದ್ದು ಗೊತ್ತೆ ಆಗಲಿಲ್ಲ. ಯುಕೆ ವೀಸಾ, ಪ್ಯಾಕಿಂಗಿನಲ್ಲಿ, ಬೇಸಿಗೆಯ ತಿರುಗಾಟದಲ್ಲಿ ಮತ್ತು ಪಾರ್ಟಿಗಳಲ್ಲಿ ಸಮಯ ಉರುಳಿ ಹೋಗಿತ್ತು!!

ಆದರೆ ಈ ಸರ್ತಿ ಯಾಕೋ ಸಮಯವೇ ಚಲಿಸುತ್ತಿಲ್ಲ ಅನಿಸುತ್ತಿದೆ. ಟಿಕೆಟ್ ಬುಕ್ಕಾಗಿದೆ. ಅಕ್ಟೋಬರ್ 25 ಕ್ಕೆ ಪಿಕ್ ಮಾಡಲು ಗೆಳೆಯರು ಬರುವುದೂ ನಿಗದಿಯಾಗಿದೆ. ಅಣ್ಣ ನೋಡಲು ಕೆಲ (ಪ್ರಾಸ್ಪೆಕ್ಟಿವ್) ಹುಡುಗಿಯರ ಲಿಸ್ಟ್ ಅನ್ನೂ ರೆಡಿ ಮಾಡಿದ್ದಾಗಿದೆ. ಆದರೆ ಉಳಿದಿರುವ ಈ ಎರಡು-ಮೂರು ವಾರಗಳನ್ನು ಇಲ್ಲಿ ಕಳೆಯುವ ಕಷ್ಟ ಮಾತ್ರ ಹೇಳತೀರದು. ದೊಡ್ಡ ಅತ್ತಿಗೆಯ ಡೆಲಿವರಿ ಡೇಟ್ ಹತ್ತಿರ ಬಂದಿದೆ. ಇಬ್ಬರಲ್ಲಿ ಯಾರ ನಿರೀಕ್ಷೆ ಹೆಚ್ಚು ಕಷ್ಟಕರ ಎಂದು ಹೇಳುವುದು ಕಷ್ಟಕರ!!

ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಕೆರೆದುಕೊಳ್ಳಲೂ ಸಮಯವಿಲ್ಲದ ದಿನಗಳಿದ್ದ ಈ 2 ವರ್ಷಗಳು ಒಂದು ಕಡೆಯಾದರೆ ಈ ಮೂರು ವಾರಗಳು ಇನ್ನೊಂದು ತೂಕವೇ. ಆಫೀಸಿನಲ್ಲೂ ಕೆಲ್ಸ ಕಡಿಮೆ. ಇನ್ನೇನು ಹೋಗುವವ, ಹೀಗಾಗಿ ಇಲ್ಲಿರುವುವರು ಮಾಡಲಿ ಎಂದು ಇರುವ ಕೆಲ್ಸವನ್ನೂ ಮಾಡಲು ಬಿಡದ ನನ್ನ ಟೀಮ್, ನನ್ನ ಇಲ್ಲಿನ 2 ವರ್ಷಗಳ ಬಗ್ಗೆ ಯೋಚಿಸುವಂತೆ ಮಾಡುತ್ತಿದೆ.

ಊರ ತುಂಬ ಜನರಿದ್ದರೂ ಸ್ನೇಹಿತರಿಲ್ಲದಿರುವುದು, ಇರುವ ಕೆಲವರ ನಡುವೆಯೂ ಒಂಟಿಯಾಗಿರುವ ಗೋಳನ್ನು ಕಲಿಸಿದೆ ಈ ಲಂಡನ್. ಅದರ ಜೊತೆಗೇ ನನ್ನನ್ನ ಗಟ್ಟಿಯಾಗಿಸಿಯೂ ಇದೆ. ಹೊಸ ಗೆಳೆಯರನ್ನು ಕೊಟ್ಟಿದೆ. ಬರೆಯಲು ಪ್ರೇರೇಪಿಸಿದೆ. ಓದಿಸಿದೆ. ಕೆಲ್ಸ ಕಲಿಸಿದೆ. ಅಗತ್ಯವಾಗಿದ್ದ ಹಣಕಾಸು ಒದಗಿಸಿದೆ. ಅತಿಯಾಗಿ ಪ್ರೀತಿಸುತ್ತಿದ್ದೆ ಮಳೆಯ ಬಗ್ಗೆ ಬೇಸರ ಮೂಡಿಸಿದೆ. ಅಪರೂಪವಾಗುವ ಸೂರ್ಯನ ಬಗ್ಗೆ ಕುತೂಹಲ ಮೂಡಿಸಿದೆ. ಜೀವನದ ಮೊದಲ ಕ್ರಿಕೆಟ್ ಮ್ಯಾಚ್ ತೋರಿಸಿದೆ, ಅದೂ ಭಾರತ-ಪಾಕ್ ನಡುವೆ. ವೃತ್ತಿಯನ್ನು ರೂಪಿಸಿದೆ.

ತಿರುಗಿ ನೋಡಿದರೆ eventful ಆಗಿದ್ದ ನನ್ನ ಲಂಡನ್ ವಾಸ ಇನ್ನೇನು ಮುಗಿಯಲಿದೆ. ಆದರೆ ಬಂದಾಗಿದ್ದವನಿಗಿಂತ ಬದಲಾಗಿ (ಒಳ್ಳೆಯದಕ್ಕೆ) ಮರಳುತ್ತಿದ್ದೇನೆಂಬ ಸಮಾಧಾನದಿಂದ ಲಂಡನ್ನಿಗೆ ಒಂದು ಸಲಾಮ್!!

Sunday 13 September 2009

ರಾಂಗ್ ನಂಬರ್

ಮಂಗಳವಾರ ಅಕ್ಕಿ-ಆಲೂರು, ಗುರುವಾರ ಸ್ವಂತ ಊರು, ಶುಕ್ರವಾರ ಹಾನಗಲ್, ಶನಿವಾರ ಆನವಟ್ಟಿ, ಭಾನುವಾರ ದಾಸನಕೊಪ್ಪ - ಹೀಗೆ ವಾರಕ್ಕೊಂದು ಊರಿನ ಸಂತೆಯಲ್ಲಿ ಬೆಳ್ಳುಳ್ಳಿ ಮಾರಲು ಹೋಗುತ್ತಿದ್ದ ಮೌನೇಶನಿಗೆ, ಮೊಬೈಲ್ ಖರೀದಿಸಲು ತಿರುಗಾಟವಷ್ಟೆ ಅಲ್ಲದೆ, ಊರಲ್ಲೇ ಮೊಬೈಲ್ ಟವರ್ ಬಂದಿದ್ದು ಕಾರಣವಾಗಿತ್ತು. ಹಾವೇರಿ ಆರ್. ಟಿ. ಒ ನಲ್ಲಿ ಕೆಲಸ ಮಾಡುತ್ತಿದ್ದ ಬಶ್ಯಾ, ಟೆಂಪೋ ಓಡಿಸುತ್ತಿದ್ದ ಸುನ್ಯಾ, ಹಾರ್ಡ್ ವೇರ್ ಅಂಗಡಿಯ ವಿನಾಯಕ, ಬೇರೆ ಕಡೆಯಿಂದ ತಂದು ಲೀಟರಿಗೆ ೪ ರೂ. ಹೆಚ್ಚಿಸಿ ಪೆಟ್ರೋಲ್ ಮಾರುತ್ತಿದ್ದ ಈರೇಶಿ, ಮಲ್ಟಿ ನ್ಯಾಶನಲ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದು, ವಾರಕ್ಕೊಮ್ಮೆ ಊರಿಗೆ ಬರೋ ಸಾದಿಕ್ ಹೀಗೆ ಓರಗೆಯ ಎಲ್ಲರ ಬಳಿ ಮೊಬೈಲ್ ಇತ್ತು. ತಾನು ಹಿಂದುಳಿಯಬಾರದೆಂದು ಒಂದು ಮಂಗಳವಾರ ಆಲೂರಿಗೆ ಬದಲಾಗಿ ಹಾವೇರಿಗೆ ಹೋಗಿ ಮೌನೇಶಿಯೂ ಒಂದು ಮೊಬೈಲ್ ಖರೀದಿಸಿದ.



ಎಲ್ಲರೂ ಓರಗೆಯವರೆ. ಎಲ್ಲರೂ ಪಿಯೂಸಿ ಮುಗಿಸಿ ಮನೆಯ ವ್ಯಾಪಾರ ಮುಂದುವರೆಸಿದ್ದರು. ಮೊಬೈಲ್ ಯುಗದ ಆರಂಭದ ಅಬ್ಬರ ಜೋರಾಗೇ ಇತ್ತು. ಊರಲ್ಲಿ ಪಕ್ಕದ ಬೀದಿಯಲ್ಲಿದ್ದರೂ ಕಾಲ್ ಮಾಡಿ ಮಾತಾಡುವುದು, ಮಿಸ್ಡ್ ಕಾಲ್ ಮಾಡಿ ಟೈಮ್ ಹೊಂದಿಸಿ ಗಿರೀಶನ ಅಂಗಡಿ ಬಳಿ ಸೇರುವುದು, ಮೆಸೇಜ್ ಮಾಡಿ ನಂಬರ್ ತೆಗೆದುಕೊಳ್ಳುವುದು, ಇತ್ಯಾದಿ ಇತ್ಯಾದಿ... ಸ್ವಲ್ಪ ಬದಲಾವಣೆ ಇರಲಿ ಎಂದು ಇತ್ತೀಚಿಗೆ ಅಡ್ಡೆ ಬದಲಾಯಿಸಿ ಸುನ್ಯಾನ ಟೆಂಪೋದಲ್ಲಿ ಸೇರತೊಡಗಿದ್ದರು.



ಎಲ್ಲರ ಸಮಯ ಕೂಡಿಬಂದು ಒಂದಿನ ಗೋಕಾಕ್ ಫಾಲ್ಸ್ ಗೆ ಟ್ರಿಪ್ ಗೆ ಹೋಗುವುದೆಂದು ನಿರ್ಧರಿಸಿದರು. ಊರಲ್ಲಿ ಕುಡಿಯಲಾಗುವುದಿಲ್ಲವೆಂಬುದು ಮುಖ್ಯ ಕಾರಣ. ಹುಬ್ಬಳ್ಳಿಗೆ ಬರುತ್ತಲೇ ಶುರುವಾದ ಪಾನಸೇವನೆ, ಕಾರಲ್ಲೂ ಮುಂದುವರೆದಿತ್ತು. ಸವದತ್ತಿ ರೋಡಿನಲ್ಲಿರಬೇಕಾದರೆ ಶುರುವಾಯಿತು ಮೊಬೈಲ್ ಹೊಡೆದುಕೊಳ್ಳ್ಸಲು. ಕಾಲ್ ಬಂದಿದ್ದು ಸುನಿಲನ ಸೆಲ್ ಗೆ. ಮೊದಲಿಗೆ ಹೆದರಿಕೆ - ಮನೆಯವರದ್ದ್ಯಾರದ್ದೋ ಇರಬೇಕೆಂದು. ಆದರೆ ನಂಬರ್ ಪರಿಚಿತವಲ್ಲ. ಹೊಟ್ಟೆಯಲ್ಲಿ ಶಂಕರ ಬೇರೆ. ತಲೆ ಓಡುತ್ತಿಲ್ಲ, ತಿರುಗುತ್ತಿದೆ. ಕಾಲ್ ಕಟ್ ಮಾಡಿದ. ಮತ್ತೆ ರಿಂಗ್ ಆಯ್ತು. ಮತ್ತೆ ಕಟ್ ಮಾಡಿದ. ಹೀಗೆ ಮುಂದುವರೆದಿತ್ತು ಆಟ. ಇನ್ನೊಂದಿಷ್ಟು ಎಣ್ಣೆ ಬಿದ್ದಿದ್ದೇ ಇನ್ನಿಲ್ಲದ ಧೈರ್ಯ ಬಂತು. ಈ ಸರ್ತಿ ಎತ್ತುವುದೆಂದು ನಿರ್ಧರಿಸಿದರು. ಕಾರಿನ ಸಂಗೀತ ನಿಂತಿತ್ತು. ಆದರೆ ಕಾಲ್ ಬರಲಿಲ್ಲ. ತಲೆ ಕೆಟ್ಟು ತಾನೆ ಕಾಲ್ ಮಾಡಿದ. ’ಯಾರ್ರಿ ಮಾತಾಡೋದು.. ಯಾರ್ ಬೇಕಾಗಿತ್ತ್ರಿ?’ ಆ ಕಡೆಯಿಂದ ಹೆಣ್ಣಿನ ಧ್ವನಿ. ’ನಾನ್ ಶುಭ ಮಾತಾಡ್ತಿರೋದು. ಎಲ್ಲಿದಿಯ, ಏಕೆ ಕಾಲ್ ಎತ್ತುತ್ತಿಲ್ಲ?’ ಕಂಪ್ಲೆಂಟಿನ ಧ್ವನಿ. ’ನಾ ಹೊರಗ್ ತಿರ್ ಗಾಡಾಕ್ ಬಂದೀನ್ರಿ, ಗೋಕಾಕ್ ಕಡೆ ಹೊಂಟಿದ್ವ್ಯೆ, ಹಿಂಗಾಗಿ ಗೊತ್ತಾಗಿಲ್ಲ್ರಿ. ಯಾಕ್ ಕಾಲ್ ಮಾಡಿದ್ದ್ರಿ? ಗಾಡಿ ಎನಾರ ಭಾಡಿಗಿಗ್ ಬೇಕಿತ್ತೇನ್ರಿ? ಯಾವ್ ಊರ್ರಿ?’ ಸುನ್ಯಾನ ವ್ಯಾಪಾರಿ ಬುದ್ಧಿಗೆ ಯಾವುದೇ ಶೆರೆ ಹತ್ತುತ್ತಿರಲಿಲ್ಲ. ಅದು ಯಾವಾಗಲೂ ಎಚ್ಚರವಿರುತ್ತಿತ್ತು.

ಆದರೆ ಆ ಕಡೆಯ ಧ್ವನಿಗೆ ಕನ್ಫ್ಯೂಷನ್. ಈ ಭಾಷೆ ಹೊಸದು. ’ಏ, ಎನಾಯ್ತೋ ನಿಂಗೆ, ಈ ಭಾಷೆ ಎಲ್ಲಿ ಕಲ್ತೆ, ಅದು ಅಲ್ದೆ ಗೋಕಾಕ್ ಎಲ್ಲಿದೆಯೋ? ನೀನ್ ಅಲ್ಲಿಗೇಕೆ ಹೋಗ್ತಿದ್ದೀಯ? ಈ ರೀ ಅನ್ನೋದ್ ಯಾವಾಗಿಂದ ಕಲ್ತ್ಯೋ?’



ರಾಂಗ್ ನಂಬರ್ ಅಂತ ಹೊಳೆದಿದ್ದೇ ಆಗ. ಆದರೆ ಕಾಲ್ ಮಾಡಿದ್ದು ತಾನೇ ಆದ್ದರಿಂದ ಹೆಚ್ಚಿಗೆ ಮಾತು ಬೆಳೆಸದೇ ಕಟ್ ಮಾಡಿದ. ಹೊಟ್ಟೆಯಲ್ಲಿದ್ದ ಪರಮಾತ್ಮ ಎಲ್ಲರ ಮನಸ್ಸಲ್ಲೂ ಮಂಗನಾಟ ಶುರು ಮಾಡಿತ್ತು. ತಲೆಗೊಂದು ಮಾತು.”ಯಾವ್ದೋ ಮೈಸೂರ್ ಕಡೆ ಹುಡುಗಿಲೇ, ರಾಂಗ್ ನಂಬರ್ ಆಗಿತ್ತ, ಹಿಂಗಾಗಿ ಕಟ್ ಮಾಡೀದ್ಯಾ’ ಅಂದರೂ ಕೇಳಲು ತಯಾರಿಲ್ಲ.

ಅಂತು ಇಂತು ಗೋಕಾಕ್ ಜಲಪಾತ ನೋಡಿ ಬಂದಿದ್ದಾಯ್ತು. ಆದರೆ ಆ ನಂಬರ್ ನಿಂದ ಕಾಲ್ ಬರುವುದು ನಿಲ್ಲಲಿಲ್ಲ. ಒಂದು ವಾರ-ಹತ್ತು ದಿನದಲ್ಲಿ ಇಬ್ಬರೂ ಇನ್ನೊಬ್ಬರ ಬಗ್ಗೆ ಎಷ್ಟು ತಿಳ್ಕೋಬೇಕಿತ್ತೋ ಅದಕ್ಕಿಂತ ಜಾಸ್ತಿ ತಿಳಕೊಂಡಿದ್ದರು. ಅಥವಾ ಹಾಗೆ ಅಂದುಕೊಡ್ಡಿದ್ದರು. ಹೀಗೇ ಒಂದು ಸಂಜೆ ಸಿಕ್ಕಾಗ ಸುನ್ಯಾ ಈ ವಿಷಯದ ಪ್ರಸ್ತಾಪ ಮಾಡಿದ. ಅದೇ ಸಮಯಕ್ಕೆ ಕಾಲ್ ಬಂತು. ಈ ಸರ್ತಿ ಫೋನ್ ಎತ್ತಿದ್ದು ಮೌನೇಶಿ. ಅರ್ಧ ಗಂಟೆ ಮಾತಾಡಿದ! ಅದೇ ಮೊದಲು - ಅದೇ ಕೊನೆ, ಸುನ್ಯಾನ ನಂಬರಿಗೆ ಕಾಲ್ ಬರ್ಲಿಲ್ಲ.

ಈಗ ಮೌನೇಶಿ ಶುಭಾಳನ್ನು ಮದುವೆ ಆಗಿ ಆರು ತಿಂಗಳು!

Sunday 6 September 2009

ನೆನಪಾದೆ..

ಶೂನ್ಯದೆಡೆ ಮನಸ್ಸು
ಮುಖ ಮಾಡಿರಲು,
ಬೇರೆಡೆ ತಿರುಗಿಸಲು
ಮತ್ತೊಂದಿಷ್ಟು ಶೂನ್ಯಗಳ
ಹುಡುಕಾಟದಲ್ಲಿದ್ದಾಗ
ನೀ ನೆನಪಾದೆ..

ಇಲ್ಲಿರುವೆ ಇರುವೆಯಷ್ಟೇ,
ಅಲ್ಲಿರುವುದು ಇಲ್ಲಿರುವಷ್ಟೇ ನಿಜವೀಗ,
ನೀನಲ್ಲಿರುವುದೋ, ಇಲ್ಲಿರುವುದೋ,
ನಾವೆಲ್ಲಿರುವುದೆಂದು
ಹುಡುಕಾಟದಲ್ಲಿದ್ದಾಗ
ನೀ ನೆನಪಾದೆ...

ಇರುವನ್ನು ನೆನಪಿಸುವಂತೆ
ಕಣ್ರೆಪ್ಪೆ ಮಿಟುಕಿದಾಗ,
ಬಿಂದುವಿನಿಂದ ಬಿಂದುವಿಗೆ
ಶೂನ್ಯ ಚಲಿಸಿದಾಗ
ಬಿಂದುವಿನ ಹಿಂದೆ ಮನ ಅಲೆದಾಗ
ನೀ ನೆನಪಾದೆ...

ನೀ ನೆನಪಾದೆ,
ನೀನಿಲ್ಲಿರುವೆ, ನಾನಲ್ಲಿರುವೆ,
ನೀ ನನ್ನಲಿ, ನಾ ನಿನ್ನಲಿ
ನಾನು, ನೀನು ನಾವಾಗುವ ಪರಿಯಲ್ಲಿ
ನೀ ನೆನಪಾದೆ...

Sunday 23 August 2009

ಕಳ್ಳ ಗಣಪ..

"ಈ ಸರ್ತೆ ಕರೇಗಲ್ ಗಣಪ್ಪ ಎಲ್ಲಾರ್ನೂ ಮೀರ್ಸಬೇಕ್, ಆ ಅಗಶಿಬಾಗಲದವರಿಗೆ ಹೆಂಗಾರ ಮಾಡಿ ನಮ್ ಕಡೆ ಬರೋಹಂಗ ಮಾಡಿದ್ರ ನಮ್ಮನ್ ಹಿಡಿಯೋರಿಲ್ಲ ಮಾಸ್ತರ...." ಪ್ರತಿ ವರ್ಷದ ಚೌತಿಗೆ ಈ ಮಾತು ಬಂದೇ ಬರೋದು. ಪ್ಯಾಟ್ಯಾಗಿನವರಿಗೆ ಗಣಪ್ಪನ್ ಹೆಂಗ್ ಇಡೋದು ಅನ್ನೋದನ್ನ ತೋರಿಸಬೇಕು ಎಂದು ನಾವು ನಿರ್ಧರಿಸದರೆ, ಅದೇ ನಿರ್ಧಾರ ಆ ಕಡೆಯವರಲ್ಲಿ ದುಪ್ಪಟ್ಟಾಗಿರುತ್ತಿತ್ತು. ಇರೋ ೪ ಸಾವಿರ ಜನಸಂಖ್ಯೆಯ ಊರಲ್ಲೇ ಓಣಿಗೊಂದರಂತೆ ಹತ್ತಿಪ್ಪತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿತನಾಗಿರುತ್ತಿದ್ದ ಗಣಪ್ಪ, ನನ್ನೂರಲ್ಲಿ ದೊಡ್ಡ ಗದ್ದಲದ ದೇವರು! ತದಿಗೆ ತನಕ ಇರುತ್ತಿದ್ದ ಮುನಿಸು, ಒಳ ಜಗಳಗಳು ಸಂಜೆಯಷ್ಟರಲ್ಲಿ ಮಾಯವಾಗಿ, ಅಲಂಕಾರಕ್ಕೆ ಬೇಕಾದ ವ್ಯವಸ್ಥೆ, ಅವಸ್ಥೆಗಳಲ್ಲಿ ಮುಳುಗಿ ಆ ಕ್ಷಣದ ಟೀಮ್ ತಯಾರಾಗಿರುತ್ತಿತ್ತು. ದಿ ಮೋಸ್ಟ್ ಸೆಲೆಬ್ರೇಟೆಡ್ ೪ ಹಬ್ಬಗಳಲ್ಲಿ ಬಹುಷಃ ಚೌತಿ ನಂ ೧. ದೀಪಾವಳಿ, ದಸರ, ಹೋಳಿ ನಂತರದಲ್ಲಿ ಬರುವ ಹಬ್ಬಗಳು.

ಕಣ್ಣು ಬಿಟ್ಟಾಗಿಂದ, ಬುದ್ಧಿ ಬೆಳೆದಾಗಿಂದ ಮನೆಯಲ್ಲಿ ಎಲ್ಲಿ ನೋಡಿದರಲ್ಲಿ ಗಣೇಶ ಮೂರ್ತಿ/ಚಿತ್ರಗಳನ್ನು ನೋಡಿದವ ನಾನು. ಅಣ್ಣನಿಗೆ ಇನ್ನಿಲ್ಲದ ಭಕ್ತಿ ಗಣಪ್ಪನ ಮೇಲೆ. ಬೇರೆ ಮನೆಯಲ್ಲಿದ್ದರೂ ಅವಿಭಕ್ತ ಕುಟುಂಬ, ಹಾಗಾಗಿ ಮನೆಯಲ್ಲಿ ಗಣೇಶ ಇಲ್ಲ. ’ಆ ಮನೆ’ (ದೊಡ್ಡಪ್ಪನ ಮನೆ)ಯಲ್ಲಿ ಸ್ಥಾಪನೆ, ಪೂಜೆ, ಊಟ. ಚಿಕ್ಕಪ್ಪ/ಚಿಕ್ಕಮ್ಮನವರ ಆಗಮನ ಹತ್ತಿರದ ಹಾನಗಲ್ ನಿಂದ. ಅತ್ಯಾಳಂತೂ ಒಂದು ದಿನ ಮುಂಚೆಯೇ ಹಾಜರ್. ಅವಳ ಬರುವಿಕೆ ಕಾಯುವುದಕೆ ಅವಳು ಶಿರಸಿಯಿಂದ ತರುತ್ತಿದ್ದ ತಾಳೆಗರಿ ಪಟಾಕಿ ಮುಖ್ಯ ಕಾರಣ! ನಮ್ಮಲ್ಲಿ ಪಟಾಕಿ - ಗಣೇಶನ ಹಬ್ಬಕ್ಕೆ, ದೀಪಾವಳಿಗಲ್ಲ. ಊರ ತುಂಬ ೫ ದಿನ ಗದ್ದಲ, ೧೧ ನೇ ದಿನದವರೆಗೂ ಮುಂದುವರಿಯುವುದು.

ಹೀಗೆ ಮನೆಯಲ್ಲಿ ಕಿರಿಯನಾಗಿ, ಸಾರ್ವಜನಿಕ ಗಣೇಶೋತ್ಸವದಲ್ಲಿ ಹಿರಿಯರಲ್ಲಿ ಕಿರಿಯವನಾಗಿ ಎರೆಡೆರಡು ಕಡೆ/ಸಲ ಹಬ್ಬ. ಜೊತೆಗೆ ೭ನೇ ಕ್ಲಾಸ್ ತನಕ ಶಾಲೆಯಲ್ಲೂ ಹಬ್ಬ! ಒಂದು ಹಬ್ಬದಲ್ಲಿ ಹತ್ತಾರು ಹಬ್ಬಗಳನ್ನು ಜೊತೆಗೇ ತರುವ ವಿನಾಯಕ ಸ್ಪೆಷಲ್ ದೇವರೇ. :)

ಆದರೂ ಮನಸ್ಸಿನಲ್ಲೇನೋ ಕುಟುಕು. ಅಣ್ಣ-ಅಮ್ಮ ಇವತ್ತಿಗೂ ಗೊಣಗಿಲ್ಲ, ಆದರೂ ನನ್ನ ಆ ಚಿಕ್ಕ ಮನಸ್ಸಿಗೇಕೋ ಕೊರತೆ. ನಮ್ಮನೇಲಿ ಗಣಪ್ಪ ಯಾಕಿಲ್ಲ? ಅಷ್ಟೊಂದು ಭಕ್ತಿ ಇಡುವ ಅಣ್ಣ, ಮನೇಲಿ ಯಾಕೆ ವಿಘ್ನನಾಶಕನ್ನ ಕೂರಿಸಲ್ಲ? ನಮ್ಮನೇಲೆ ಯಾಕೆ ಅಡಿಗೆ ಮಾಡಿ, ನೈವೇದ್ಯೆ ಮಾಡಿ, ಪೂಜಿಸಬಾರದು? ಬಹುಷಃ ೪ ನೇ ಕ್ಲಾಸ್ ನಿಂದ ಈ ವಿಚಾರಗಳು ಬರುತ್ತಿದ್ದವು. ಹೈ ಸ್ಕೂಲಿಗೆ ಬರುವಷ್ಟರಲ್ಲಿ ಈ ವಿಚಾರಗಳು ಬಲಿತಿದ್ದವು. ಆದರೂ ಯಾರಲ್ಲಿಯೂ ಹೇಳಿರಲಿಲ್ಲ. ಕೊನೆಗೊಂದು ವರ್ಷ, ೯ ನೇಕ್ಲಾಸ್ ನಲ್ಲಿದ್ದಾಗ, ಕರೇಗಲ್ ಗಣಪ್ಪನ ತಯಾರೀಲಿ ಕೂತವನಿಗೆ ಕಂಡಿದ್ದು, ಬಡಿಗೇರ್ ಗಿರಿ ಮಾಡಿಟ್ಟಿದ್ದ ಚಿಕ್ಕ ಗಣಪ. ಅದು ಅವರಪ್ಪ ಮಾಡಿದ ದೊಡ್ಡ ಗಣಪನ ಪಕ್ಕ ಕೂರಿಸುವ ವಿಚಾರದಿಂದ ಮಾಡಿಟ್ಟಿದ್ದು. ಎಲ್ಲಿತ್ತೋ, ಅವನ ಜೊತೆ ಮಾತಾಡಿ, ಅವನನ್ನೇ ಕಳ್ಳ ಗಣಪ್ಪನ ಇಡುವ ಕಳ್ಳನ ರೋಲ್ ಗೆ ಒಪ್ಪಿಸಿದೆ. ಬೆಳಿಗ್ಗೆ ೪-೫ ಗಂಟೆಗೆ ಮನೆ ಮುಂದೆ ಆ ಮೂರ್ತಿಯನ್ನಿಡುವ ಒಪ್ಪಂದವಾಯಿತು. ನಾನು ರಾತ್ರಿ ಹೊರಗೆ ಇದ್ದರೆ ಸಂಶಯ ನನ್ನ ಮೇಲೇ ತಿರುಗುತ್ತದೆಯೆಂದು ರಾತ್ರಿ ಬೇಗನೇ ಮನೆಗೆ ಬಂದೆ. ಎಲ್ಲರ ಜೊತೆ ಊಟ ಮಾಡಿ ನನ್ನಿರುವನ್ನು ನಿರೂಪಿಸಿದೆ. ಅರೆ ಮನಸ್ಸಿನಿಂದಿದ್ದ ನಾನು, ಮಲಗೋ ಹೊತ್ತಿಗೆ ಪೂರ್ತಿ ತಯಾರಾಗಿದ್ದೆ. ಅಂದುಕೊಂಡ ಹಾಗೆ, ಬೆಳಿಗ್ಗೆ ಅಮ್ಮ ಕಸಗುಡಿಸಲು ಎದ್ದಾಗ, ಅದೋ, ಎದುರುಗಿದ್ದ ಕರೇಗಲ್ ನಲ್ಲಿ ಪಕ್ಕದಲ್ಲಿ ಕೂರಬೇಕಿದ್ದ ಪುಟ್ಟ ಗಣೇಶ!!

ಶುರುವಾಯಿತು ಗದ್ದಲ, ಗೊಂದಲ. ಮುಂದೇನು ಮಾಡುವುದು ಎಂದು ಎಲ್ಲ ದೊಡ್ಡವರ ಸಮಾಲೋಚನೆ. ಅವನನ್ನೂ ಆ ಮನೇಲೆ ಕೂಡಿಸಿ ಪೂಜಿಸುವುದೆಂದು ಅಣ್ಣನ ವಾದ. ಇಲ್ಲ, ಅವನಾಗೇ ಹಿಂದಿನ ಮನೆ (ನಮ್ಮನೆ)ಗೆ ಬಂದಿರುವುದರಿಂದ ಅಲ್ಲೇ ಕೂಡಿಸಿ ಪ್ರತ್ಯೇಕ ಪೂಜೆ-ನೈವೇದ್ಯ ಎಂದು ದೊಡ್ಡಪ್ಪ-ಚಿಕ್ಕಪ್ಪನ ವಾದ. ಜೊತೆಗೇ ಚಿಕ್ಕ ಮೂರ್ತಿಯ ಅಂದದ ಹೊಗಳಿಕೆ. ಒಂದೆರೆಡು ಗಂಟೆಯ ಮೀಟಿಂಗ್ ನಂತರ ದೊಡ್ಡಪ್ಪನ ಮಾತಿನಂತೆ ನಮ್ಮನೇಲೆ ಕೂರಿಸುವುದೆಂದು ನಿಶ್ಚಯಿಸಿದಾಗ ಏನೋ ಸಾರ್ಥಕತೆ. ಆ ವರ್ಷ ನಾನು ಸ್ವಲ್ಪ ಜಾಸ್ತಿಯೇ ಪಟಾಕಿ ಹೊಡೆದರೆ, ಅಣ್ಣ ಸ್ವಲ್ಪ ಡಲ್ ಆಗಿದ್ದರು. ಅಮ್ಮನಿಗೆ ಖುಷಿಯೋ ಖುಷಿ. ಎಲ್ಲರಿಗೂ ನನ್ನ ಮೇಲೆ ಒಂದು ಅನುಮಾನ, ಇದು ಇವನದೇ ಕೆಲಸ ಎಂದು. ಆದರೆ ನಾನೆಲ್ಲೂ ಅದನ್ನು ಬಿಟ್ಟು ಕೊಡಲಿಲ್ಲ. ನನ್ನ ಗೆಳೆಯರ ಕೆಲಸ ಇರಬಹುದು, ಆದರೆ ನಾನು ಹೇಳಿ ಮಾಡಿಸಿದ್ದಲ್ಲ ಎಂದು ಸುಳ್ಳು ಪಟಾಕಿ ಬಿಟ್ಟೆ, ಗೆದ್ದೆ!!

ಹೀಗೆ ಕಳ್ಳ ಗಣಪ ಮನೆಗೆ ಬಂದಿದ್ದು ನಮ್ಮನೆಗೆ.

ಮುಂದೆ ಐದಾರು ವರ್ಷಗಳವರೆಗೆ ನನ್ನ ಗುಟ್ಟನ್ನು ಕಾಪಾಡಿಕೊಂಡಿದ್ದೆ. ಡಿಗ್ರಿ ಓದಲು ಧಾರವಾಡದಲ್ಲಿದ್ದಾಗ ಕೊನೆಗೊಂದು ಸರ್ತಿ ಗಣೇಶ ಚೌತಿಯಂದೇ ಗುಟ್ಟು ರಟ್ಟು ಮಾಡಿದೆ. (ಹೊಡೆಯುವುದಿಲ್ಲ ಎಂದು ಗ್ಯಾರಂಟಿಯಾದ ನಂತರವೇ :) )

ಅದಾಗಿ ಈಗ ೧೩ನೇ ವರ್ಷ. ದೊಡ್ಡಣ್ಣ್ (ದೊಡ್ಡಪ್ಪನ ಮಗ) ಹೊಸಪೇಟೆ-ಹುಬ್ಬಳ್ಳಿ. ಅಣ್ಣ ಬೆಂಗಳೂರು. ನಾನಿಲ್ಲಿ ಲಂಡನ್. ಹೀಗೆ ಮಕ್ಕಳೆಲ್ಲ ಬೇರೆ ಕಡೆ ಇರುವಾಗ, ಮನೇಲಿ ಅಣ್ಣ-ಅಮ್ಮ ಇಬ್ಬರೇ. ಕಳ್ಳ ಗಣಪನ ಆಗಮನದಿಂದ ಈಗಲೂ ನಮ್ಮನೇಲಿ ಪೂಜೆ. ಮುಂಚೆಯಲ್ಲ ೧೧ ದಿನ ಇರುತ್ತಿದ್ದ ಗಣಪ, ೫ ದಿನಕ್ಕಿಳಿದು, ೩ ದಿನದ ಅತಿಥಿಯಾಗಿ, ಈಗ ಬೆಳಿಗ್ಗೆ ಬಂದು ಸಂಜೆ ಹೋಗುವ ನಮ್ಮಣ್ಣ- ನನ್ನ ಥರ ಆಗಿದ್ದಾನೆ ಎಂದು ಅಣ್ಣ ಹೇಳಿದಾಗ ಸ್ವಲ್ಪ ಕಸಿವಿಸಿಯಾಯಿತು. ಆದರೂ..... ಅಮ್ಮನ ಗಡಿಬಿಡಿ, ಅಣ್ಣನ ಸಂಭ್ರಮ ನೋಡಿದರೆ... ಕಳ್ಳತನದಿಂದ ತರಿಸಿದ ಗಣೇಶನಿಗೊಂದು ಮನಸ್ಸಿನಲ್ಲೇ ನಮಸ್ಕಾರ ಹಾಕುತ್ತೇನೆ.

Monday 20 July 2009

ದೇವರಿಗೇಕೆ ಸೀಮೆ?

ಕಳೆದ ವಾರ ಬರ್ಮಿಂಗ್ ಹ್ಯಾಮ್ - ಬ್ಲ್ಯಾಕ್ ಪೂಲ್ ತಿರುಗಾಡಲೆಂದು ಹೋಗಿದ್ದೆ. ಅಲ್ಲಿನ ಬಾಲಾಜಿ ದೇವಸ್ಥಾನದ ಬಗ್ಗೆ ಇನ್ನೊಮ್ಮೆ ಗೀಚುವೆ. ಆದರೆ ಆ ದೇವಸ್ಥಾನದಲ್ಲಿ ನೋಡಿದ, ಅನುಭವಿಸಿದ ಒಂದು ವಿಷ್ಯದ ಬಗ್ಗೆ ಬರೀ ಬೇಕೆನಿಸಿತು.

ಗೆಳೆಯರೊಂದಿಗೆ ಕಾರಲ್ಲಿ ಗುಡಿ ತಲುಪಿದಾಗ ೧೧ ರ ಸಮಯ. ಜೊತೆಯಲ್ಲಿದ್ದವರೆಲ್ಲ ಉತ್ತರ ಭಾರತೀಯರು. ತುಂಬ ಚಂದದ ಗುಡಿ ಕಟ್ಟಿ ಕೊಂಡಿದ್ದಾರೆ ಇಲ್ಲಿನ ಭಾರತೀಯರು. ಅಲ್ಲಿದ್ದವರಲ್ಲಿ ಬಹುಪಾಲು ದಕ್ಷಿಣದವರೇ. ಜೊತೆಯಲ್ಲಿದ್ದ ಸಾರ್ಥಕ್ ನಿಗೆ ಒಂದೇ ವಿಸ್ಮಯ. ಪೂಜಾರಿಯೇಕೆ ಅರೆ ಬೆತ್ತಲು? ದಕ್ಷಿಣದಲ್ಲೇಕೆ ಈ ಥರ ಪೂಜಿಸುತ್ತಾರೆ? ದಕ್ಷಿಣದಲ್ಲಿನ ಪ್ರಸಿದ್ಧ ದೇವರು ಯಾವುದು? ಹೀಗೆ ಮುಂದುವರೆದಿತ್ತು ಅವನ ಪ್ರಶ್ನಾವಳಿ. ನನ್ನ ತಿಳುವಳಿಕೆಗೆ ತಕ್ಕ ಉತ್ತರ ಕೊಟ್ಟು ಮುಂದುವರೆದೆ. ಪ್ರಸಾದದ ಸಮಯದಲ್ಲಿ ನೆರೆದ ಗುಂಪಿನಲ್ಲು ಅದೇ ವಿಷಯ ಪ್ರಸ್ತಾಪವಾಯಿತು. ಅಲ್ಲಿ ಪೂಜಾವಿಧಿಯ ವಿವರಣೆ ಮತ್ತು ಅದರ ಹೋಲಿಕೆ ದಕ್ಷಿಣದೊಂದಿಗೆ. ಬರಿ ಮಂಡಿಯೂರಿ ನಮಸ್ಕರಿಸುವ ಅವರಿಗೆ ನನ್ನ ಸಾಷ್ಟಾಂಗ ನಮಸ್ಕ್ಯಾರ ಕಂಡು ಸ್ವಲ್ಪ ಆಶ್ಚರ್ಯವುಂಟಾಗಿತ್ತು. ಹಮಾರೆ ಯಹಾಂ ಐಸಾ ನಹಿ ಹೋತಾ ಹೈ... ಹಾಗೆ ಹೀಗೆ....

ಅದು ಅವರು ಹುಟ್ಟಿ ಬೆಳೆದ ಪ್ರದೇಶದ ರೀತಿಯೆಂದು ಸುಮ್ಮನಾಗಿ ನಮ್ಮ ಮುಂದಿನ ದಾರಿ ಹಿಡಿದು ಹೊರಟೆವು. ಹೋಗಿದ್ದು ಬ್ರಿಟನ್ ನಲ್ಲೇ ದೊಡ್ಡದಾದ ಗುರುದ್ವಾರಕ್ಕೆ. ಅಲ್ಲಿನ ಪೂಜಾವಿಧಿ ನೋಡಿ ಮತ್ತದೇ ಚರ್ಚೆ ಶುರುವಾಯಿತು. ಇಲ್ಲಿ ನಮಸ್ಕರಿಸುವ ರೀತಿ, ತಲೆ ಮೇಲೆ ಕಡ್ಡಾಯವಾಗಿ ಬಟ್ಟೆ ಧರಿಸಬೇಕೆಂಬ ನಿಯಮ, ಸಾಮೂಹಿಕ ಊಟ, ಹೆಂಗಸರಿಗೆ ಪ್ರತ್ಯೇಕ ಸ್ಥಳ ಮುಂತಾದ ವಿಷಯಗಳು ಚರ್ಚಿತವಾದವು.

ಇವು ಬರಿ ಚರ್ಚೆಯ ವಿಷಯಗಳಾಗಿದ್ದರೆ, ಮತ್ತು ಒಬ್ಬಿಬ್ಬರು ಈ ಥರ ಅಂದುಕೊಂಡಿದ್ದರೆ ವಯಕ್ತಿಕ ವಿಚಾರ ಎಂದು ಬಿಟ್ಟು ಬಿಡುತ್ತಿದ್ದೆ. ಆದರೆ ಇರುವ ಬಹುಪಾಲು ಉತ್ತರ ಭಾರತೀಯ ಗೆಳೆಯರು ಈ ಥರದ ಪ್ರಶ್ನೆ ಕೇಳಿದ್ದರು. ನನಗೆ ದಕ್ಷಿಣದ ದೇವರು-ದೇವಸ್ಥಾನ ಇಷ್ಟ ಇಲ್ಲ ಎಂದು ನೇರವಾಗಿ ಹೇಳದಿದ್ದರೂ (ದೇವರೆಂಬ ಭಯಕ್ಕೆ!!), ದಕ್ಷಿಣದವರಷ್ಟೇ ಅವರ ದೇವರೂ ನಮಗೆ ಹೊಂದಿಕೆಯಾಗಲ್ಲ ಅನ್ನುವಷ್ಟರ ಮಟ್ಟಿಗೆ ಭಾವನೆ ವ್ಯಕ್ತವಾಗಿತ್ತು.

ಹೀಗೇಕೆ ದೇವರಿಗೆ ಸೀಮೆಯ ಮೀಸಲಾತಿ? ಎಲ್ಲೇ ಹೋದರೂ ದೇವರು ದೇವರಲ್ಲವೇ?

ಈ ಜಗತ್ತನ್ನು ಅವನ ಕೃತಿಯೆಂದು ನಂಬಿದರೆ, ಈ ವಿರೋಧಾಭಾಸವೂ ಅವನದೇ ರಚನೆಯಂಬುದನ್ನೂ ನಂಬಬೇಕೆನಿಸುತ್ತದೆ. ಕೆಂಡಸಂಪಿಗೆಯಲ್ಲಿ ಓದಿ ತಿಳಿದ, ಇತ್ತೀಚಿಗೆ ಬಹುಪ್ರಭಾವಿತನಾಗಿರುವ, ನುಸ್ರತ್ ಫತೇ ಅಲಿ ಖಾನ್ ಅವರ ಗಾಯನದಲ್ಲಿರುವ ಒಂದು ಚೀಜ್ (ಕವ್ವಾಲಿ) ನೆನಪಿಗೆ ಬರುತ್ತಿದೆ. ’ತುಮ್ ಇಕ್ ಗೋರಖ್ ಧಂಧಾ ಹೋ’. ದೇವರನ್ನು ಅವನೇ ಸೃಷ್ಟಿ ಮಾಡಿರುವ ವಿರೋಧಾಭಾಸಕ್ಕೆ ಜರೆಯುತ್ತ ಅವನನ್ನು ಪ್ರಶಂಸಿವುವ ಈ ಚೀಜ್ ನ ಭಾವನೆ ಎಷ್ಟು ಸರಿಯಾಗಿದೆಯಲ್ಲವೇ?

Tuesday 7 July 2009

ಲಂಡನ್ನಿನ ಕೆಲ ಹುಚ್ಚು ಮುಖಗಳು....

ಮನುಷ್ಯರಿಗೆ ಹುಚ್ಚು ಇರ್ತವೆ. ಕೆಲವರಿಗೆ ಮಾತಾಡುವ ಹುಚ್ಚು, ಕೆಲವರಿಗೆ ತಿರುಗಾಟದ ಹುಚ್ಚು, ಇನ್ನು ಕೆಲವರಿಗೆ ಸಂಗೀತದ ಹುಚ್ಚು, ನಂಗೆ ಮರೆವಿನ ಹುಚ್ಚು. ನಾನೀಗ ಹೇಳ ಹೊರಟಿರುವುದು ಈ ತರಹದ ಹುಚ್ಚು ಅಲ್ಲ. ಸಾರ್ವಜನಿಕವಾಗಿ, ಊರಿನಲ್ಲಿ ಹಲವಾರು ಜನ ಒಂದೇ ವಿಚಾರದ ಬಗ್ಗೆ ಚರ್ಚಿಸುವುದಿದೆಯಲ್ಲ, ಅದು ನನ್ನ ದೃಷ್ಟಿಯಲ್ಲಿ ಒಂದು ಹುಚ್ಚೇ. ಕೆಲವರು ಇದನ್ನ ಪಾಸ್ ಟೈಮ್ ವಿಷಯಗಳೆನ್ನುತ್ತಾರೆ. ಆದರೆ ಈ ವಿಷಯಗಳು ಬಹಳಷ್ಟು ಜನರ ಮೇಲೆ ಪರಿಣಾಮ ಮಾಡಿ, ಬಹಳ ಕಾಲದ ವರೆಗೆ ಚರ್ಚಿಸಲ್ಪಡುವುದನ್ನು ನೋಡಿದ ಮೇಲೆ ನಾನದನ್ನು ಹುಚ್ಚೇ ಎನ್ನುತ್ತೇನೆ.

ಈ ತರಹದ ಹುಚ್ಚನ್ನು ಎಲ್ಲ ಕಡೆ ಗುರ್ತಿಸಬಹುದು. ನನ್ನ ಎರಡು ವರ್ಷದ ಲಂಡನ್ ವಾಸದಲ್ಲಿ ನಾನು ನೋಡಿದ, ಓದಿದ, ಅನುಭವಿಸಿದ ಕೆಲ ಲೋಕಲ್ ಹುಚ್ಚುಗಳ ಬಗ್ಗೆ ನನ್ನ ಕೊರೆತ...

೧. ಕ್ಲಬ್ ಫುಟ್ಬಾಲ್:- ಇದು ಲಿಸ್ಟ್ ನಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುವ ವಿಷಯ. ಫುಟ್ಬಾಲ್ ಬಗ್ಗೆ ಗೊತ್ತಿರುವವ ಬೇರೆ ಗ್ರಹದಿಂದ ಬಂದಿರುವವನಂತೆ ನೋಡುವ ಇಲ್ಲಿನ ಪ್ರತಿಯೊಬ್ಬರಿಗೂ ಒಂದು ಕ್ಲಬ್ ನ ಅಭಿಮಾನಿಯಾಗಿ ಅದನ್ನು ಬೆಂಬಲಿಸುವುದು ಒಂಥರಾ ’ಧರ್ಮ’ ಮತ್ತು ’ಕರ್ಮ’. ಆಫೀಸಿನಲ್ಲಿ, ಪಕ್ಕದಲ್ಲಿ ನ್ಯೂ ಕಾಸಲ್ ನ ಡೇವಿಡ್, ಮುಂದೆ ಹಾಟ್ ಸ್ಪರ್ಸ್ ನ ಜೇಸನ್, ಅವನ ಪಕ್ಕದಲ್ಲಿ ಆರ್ಸನಾಲ್ ನ ಕೆವಿನ್, ಅವನ ಮುಂದೆ ಎವರ್ಟನ್ ನ ಜಿಮ್, ಜಿಮ್ ನ ಪಕ್ಕದಲ್ಲಿ ಲಿವರ್ ಪೂಲ್ ನ ಸ್ಟೀವ್ ಇದ್ದರೆ, ಅವನ ಹಿಂದೆ ವೆಸ್ಟ್ ಹ್ಯಾಮ್ ನ ಮ್ಯಾಟ್ ಕೂತಿದ್ದಾನೆ. ಇವರೆಲ್ಲ ಒಂದೇ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುವವರು! ಇನ್ನೊಬ್ಬ ಸ್ಟೀವ್, ನೀಲ್ ಮತ್ತು ಇನ್ನೊಬ್ಬ ಡೇವಿಡ್ ನ ಬೆಂಬಲದಿಂದ ಜೇಸನ್ ನ ಹಾಟ್ ಸ್ಪರ್ಸ್ ಸ್ವಲ್ಪ ಸ್ಟ್ರಾಂಗ್!!
ಪ್ರೀಮಿಯರ್ ಲೀಗ್ ನಲ್ಲಿ ಆಡದ ಕ್ವೀನ್ ಪಾರ್ಕ್ ರೇಂಜರ್ಸ ನ ಸೈಮನ್ ಸ್ವಲ್ಪ ವೀಕ್. ಇವೆಲ್ಲದರ ನಡುವೆ ನಾವು ನಾಕು ಜನ ಭಾರತೀಯರಿರುವುದರಿಂದ ಮ್ಯಾನ್ ಯು ಬೆಂಬಲಿಗರೂ ಜಾಸ್ತಿ (ಭಾರತೀಯರಿಗೆ ಗೊತ್ತಿರುವ ಕ್ಲಬ್ ಒಂದೇ ತಾನೆ :) )

೨. ವೆದರ್!! :- ಇದನ್ನ ಹವಾಮಾನ ಎನ್ನಲು ನಂಗಿಷ್ಟ ಇಲ್ಲ. ಇದನ್ನ ವೆದರ್ ಅಂದರೇ ಅದರ ಹುಚ್ಚಿನ ಪ್ರಾಮುಖ್ಯತೆ ಉಳಿಯೋದು. ಛೇ, ಎಂಥ ಮಳೆ ಮಾರಾಯಾ ಬಿಡ್ತಾನೇ ಇಲ್ಲ. ನಾಳೆ ’ಸನ್ನಿ ಇಂಟರ್ವೆಲ್’ ಇದೆ. ಈ ವೀಕೆಂಡ್ ಗೆ ಬಿಸಿಲಿದೆ. ಈ ಸರ್ತಿ ಛಳಿಗಾಲ ಸೆಪ್ಟೆಂಬರ್ ಗೇ ಬಂದಿದೆ. 2006 ನ ಬೇಸಿಗೆಯಂತ ಬೇಸಿಗೆ ಕಂಡಿಲ್ಲ್ಲ. ಈ ಸರ್ತಿನೂ ’ವೆಟ್ ಸಮ್ಮರ್ರೇ’. ಹೀಗೆ ಎಲ್ಲೆ ಸಿಗಲಿ, ಎಲ್ಲೇ ಕುಡೀಲಿ, ಎಲ್ಲೇ ತಿನ್ನಲಿ, ವೆದರ್ ನ ಪ್ರಸ್ತಾಪ ಬರದಿದ್ದರೆ ಮಾತು ಸಾಗಲ್ಲ, ಮಾತು ಮುಗಿಯಲ್ಲ. ಅದೇನು ಹುಚ್ಚೋ

೩. ರಗ್ಬಿ :- ಇದು ಎರಡನೇ ಜನಪ್ರಿಯ ಕ್ರೀಡೆ. ಇಂಗ್ಲೆಂಡ್ ವಿಶ್ವಕಪ್ ವಿಜೇತರು. ಆದರೂ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಐರ್ಲ್ಂಡ್, ಆಸ್ಟ್ರೇಲಿಯದ ಜೊತೆ ಆಡುವಾಗ ಸೋಲುವುದು ಸಾಮಾನ್ಯ! ಎಲ್ಲಿ ತನಕ ಇದರ ಹುಚ್ಚು ಅಂದರೆ, ಮಗು ಹುಟ್ಟುವ ಒಂದು ದಿನ ಮುಂಚೆ ಸೌತ್ ಆಫ್ರಿಕಾಕ್ಕೆ ಹೋಗಿ ಮ್ಯಾಚ್ ನೋಡಿ ರಾತ್ರೋ ರಾತ್ರಿ ತಿರುಗಿ ಬಂದಿದ್ದ ಒಬ್ಬ ಮಹಾಶಯ!!

೪. NHS :- ಒಂದು ಕಾಲದಲ್ಲಿ ಜಗತ್ತಿಗೇ ಮಾದರಿಯಾಗಿದ್ದ ಆರೋಗ್ಯ ಇಲಾಖೆ ಇದು. ಇಲ್ಲಿ ಎಲ್ಲರಿಗೂ ಉಚಿತ ಆರೋಗ್ಯ ಸೌಲಭ್ಯ. ಅದಕ್ಕೇ ಏನೋ, ಆಸ್ಪತ್ರೆಗಳು ಯಾವಾಗಲೂ ಗಿಜಿಗಿಡುತ್ತಿರುತ್ತವೆ. ಇದರ ಬಗ್ಗೆ, ಸೌಲಭ್ಯದ ಬಗ್ಗೆ, ಸೌಲಭ್ಯದ ಕೊರತೆಯ ಬಗ್ಗೆ ಹರಟೆ ಕೊಚ್ಚುವುದು ಲಂಡನ್ನಿಗರ ಇನ್ನೊಂದು ಹುಚ್ಚುತನ. ಬೇರೆ ದೇಶಗಳಲ್ಲಿನ ಆರೋಗ್ಯ ಇಲಾಖೆ/ಸೌಲಭ್ಯಗಳ ಜೊತೆ ಹೋಲಿಸಿತ್ತ ಇಲ್ಲ ಟೀಕಿಸುವುದು, ಇಲ್ಲವೇ ಪ್ರಶಂಸಿವುದು ಸರ್ವೆ ಸಾಮಾನ್ಯ!

೫. ಅಂಡರ್ ಗ್ರೌಂಡ್, ಪ್ರವಾಸಿಗರು ಮತ್ತು ಸೈಕಲ್ ಹೊಡಿಯುವವರು :- ಸುಮಾರು ದಶಕಗಳ ಮೊದಲೆ ಒಂದು ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಲಂಡನ್ನಿನ ಜನರು ಹೊಂದಿದ್ದಾರೆ. ಭೂಮಿಯ ಕೆಳಗೆ ಹಾವುಗಳು ಸರಿದಂತೆ ಚಲಿಸುವ ರೈಲುಗಳು ಲಂಡನ್ನಿನ ಬೆನ್ನುಲುಬುಗಳು. ಇವು ನಿಂತರೆ ದಿನಕ್ಕೆ ಮಿಲಿಯಗಟ್ಟಲೆ ನಷ್ಟ! ಕಿಕ್ಕ್ರಿರಿದು ತುಂಬಿ ಚಲಿಸುವ, ಸ್ವಲ್ಪ ಮಳೆ ಜಾಸ್ತಿಯಾದರೆ ನಿಲ್ಲುವ, ಪ್ರತಿ ವಾರಾಂತ್ಯಕ್ಕೂ ರಿಪೇರಿಯೆಂದು ಸ್ಥಬ್ಧವಾಗುವ ಈ ವ್ಯವಸ್ಥೆಯ ಬಗ್ಗೆ ಬೈಯುವುದು ಇಲ್ಲಿ ಬಹಳ ಸಾಮಾನ್ಯ. ಹಾಗೆ, ಲಂಡನ್ ಒಂದು ಪ್ರಸಿದ್ಧ ಪ್ರವಾಸಿ ತಾಣ ಕೂಡ. ಇಲ್ಲೆ ಇರುವ, ಇಲ್ಲೇ ಕೆಲ್ಸ ಮಾಡುವ ಲಂಡನ್ನಿಗರಿಗೆ ಪ್ರವಾಸಿಗಳ ಪೌಂಡ್ ಗಳೇನೋ ಬೇಕು, ಆದರೆ ಪ್ರವಾಸಿಗಳು ಬೇಡ! ಈ ಜನ ಅದೇಕೆ ಕ್ಯಾಮೆರಾ ತೆಗೆದು ಎಲ್ಲೆಂದರಲ್ಲಿ ಫೋಟೋ ತೆಗೀತಾರೊ?, ಹೀಗೇಕೆ ನಿಧಾನವಾಗಿ ಚಲಿಸುತ್ತಾರೋ? ಇವರೇಕೆ ಕ್ಯಾಶುವಲ್ ಡ್ರೆಸ್ ಹಾಕ್ತಾರೋ? ಆ ಪಿಕಡಿಲ್ಲಿ ಸರ್ಕಸ್ ನಲ್ಲಿ ಅಷ್ಟೊಂದು ಜನ ಸೇರುವಂತಹುದು ಏನಿದೆಯೋ? ಹೀಗೇ ಲಂಡನ್ನ್ನಿಗರ ಗೊಣಗು ನಿಲ್ಲುವುದಿಲ್ಲ. ಇವೆರಡರ ಜೊತೆಗೇ ತಳಾಕು ಹಾಕಿಕೊಂಡಿರುವ ಇನ್ನೊಂದು ಪ್ರಾಣಿವರ್ಗ - ಸೈಕಲ್ ಹೊಡಿಯುವವರು. ಇವರಿಗೆ ಯಾವ ರೂಲ್ಸೂ ಅನ್ವಯಿಸುವುದಿಲ್ಲ. ಬರೀ ಡಿಕ್ಕಿ ಹೊಡಿತಾರೆ. ಫುಟ್ಪಾತ್ ಮೇಲೇ ಚಲಿಸುತ್ತಾರೆ. ಮೊನ್ನೆ ನನಗೆ ಒಬ್ಬ ಡಿಕ್ಕಿ ಹೊಡೆದ, ಇವತ್ತು ನನ್ನ ಸೈಕಲ್ ಕಳುವಾಯಿತು. ಈ ಮಳೆಯಿಂದಾಗಿ ನಂಗೆ ಅಂಡರ್ ಗ್ರೌಂಡೇ ಗತಿ. - ಈ ಲಂಡನ್ನಿಗರ ಗೊಣಗಾಟಕ್ಕೆ ಕೊನೆ ಇಲ್ಲ!!

೬. ಟ್ರಫಲ್ಗರ್ ಸ್ಕ್ವೇರ್ ನ ನಾಲ್ಕನೇ ಕಟ್ಟೆ (ಪ್ಲಿಂತ್): - ಟ್ರಫಲ್ಗರ್ ಸ್ಕ್ವೇರ್ ಲಂಡನ್ನಿನ ಅತಿ ಪ್ರಸಿದ್ಧ ತಾಣಗಳಲ್ಲೊಂದು. ನಾಲ್ಕೂ ದಿಕ್ಕಿನಲ್ಲಿ ಒಂದೊಂದು ಕಟ್ಟೆ ಇರುವ ಈ ಜಾಗದಲ್ಲಿ, ಮೂರು ಕಟ್ಟೆಗಳ ಮೇಲೆ ಒಂದೊಂದು ಸಿಂಹವಿದೆ. ನಾಲ್ಕನೇಯದನ್ನೇಕೋ ಖಾಲಿ ಬಿಟ್ಟಿದ್ದಾರೆ. ದುಡ್ಡಿರಲಿಲ್ಲ ಎನ್ನುವುದು ಪ್ರತೀತಿ. ಈ ಖಾಲಿ ಇರುವ ಕಟ್ಟೆಯ ಮೇಲೆ ಎಂತಹ ’ಆರ್ಟ್’ ಕೂರಬೇಕು ಎನ್ನುವುದು ಲಂಡನ್ನಿಗರ ’ಹಾಟ್ ಟಾಪಿಕ್’ ಗಳಲ್ಲೊಂದು!

೭. ಪ್ರವಾಸ! :- ಇಲ್ಲಿರುವ ದರಿದ್ರ ವಾತಾವರಣಕ್ಕೋ, ಇವರ ಹತ್ತಿರವಿರುವ ದುಡ್ಡಿಗೋ, ಮೊದಲಿಂದಲೂ ಜಗತ್ತನ್ನಾಳಿದ ಅನುಭವಕ್ಕೋ, ಒಟ್ಟಿನಲ್ಲಿ ಲಂಡನ್ನಿಗರ ಇನ್ನೊಂದು ದೊಡ್ಡ ಚಟ ಅಂದರೆ - ಜಗತ್ತು ಸುತ್ತುವುದು. ವರ್ಷದಲ್ಲಿ ಕನಿಷ್ಟ ಒಂದು ಬಾರಿ, ಯಾವುದಾದರೂ ಬೇರೆ ದೇಶಕ್ಕೆ ಹೋಗದ ಲಂಡನ್ನಿಗ ಲಂಡನ್ನಿಗನೇ ಅಲ್ಲ ಎನ್ನುವ ಮಟ್ಟಿಗೆ ತಿರುಗಾಡುತ್ತಾರೆ. ನಮ್ಮಾಫೀಸಿನಲ್ಲಿರುವ ಜೆನ್ನಿ ಹೋದ ವರ್ಷ, ಅಂದರೆ ಆರ್ಥಿಕ ಪರಿಸ್ಥಿತಿ ಅಷ್ಟು ಕೆಟ್ಟಾಗಲೂ, ೪ ಬಾರಿ ತಿರುಗಿ ಬಂದಳು. ಮಲೇಶಿಯ, ಆಸ್ಟ್ರೇಲಿಯ, ಇಜಿಪ್ತ, ಭಾರತ, ದುಬೈ, ಅಮೆರಿಕ್, ಆಫ್ರಿಕ ಮತ್ತು ಕೆಲ ಯುರೋಪಿಯನ್ ದೇಶಗಳು ಇಲ್ಲಿನವರಿಗೆ ಭಾರಿ ಪ್ರೀತಿಯ ತಾಣಗಳು. ಅರೆ, ಕೆರಿಬಿಯನ್ ದ್ವೀಪಗಳೂ ಕೂಡ! ಒಟ್ಟಿನಲ್ಲಿ ಎಲ್ಲಿಗಾದರೂ ಸೈ, ತಿರುಗಾಡಕ್ಕೆ ಎತ್ತಿದ ಕೈ!!

೮.(ಬೀರ್) ಕುಡಿಯೋದು!! :- ಅರೆ, ಇದರ ಬಗ್ಗೆ ಹೇಳದೇ ಲಂಡನ್ನಿನ ಹುಚ್ಚುಗಳು ಪೂರ್ತಿಯಾಗಲ್ಲ!! ಮೇಲಿನ ಎಲ್ಲ ವಿಷಯಗಳೂ ಚರ್ಚೆಯಾಗುವುದು ಕೈಯಲ್ಲಿ ಬೀರ್ (ಇಲ್ಲ ವೈನ್, ಇಲ್ಲ ವೋಡ್ಕ, ಇಲ್ಲ ಜಿನ್, ಇಲ್ಲ ವಿಸ್ಕಿ) ಇದ್ದಾಗಲೇ. ಕೆಲಸಕ್ಕೆ ಸೇರಿದರೆ, ಕೆಲ್ಸ ಬಿಟ್ಟರೆ, ಮದುವೆ ಆದರೆ, ಹುಟ್ಟಿದ ಹಬ್ಬಕ್ಕೆ, ಇಂಗ್ಲೆಂಡ್ ಸೋತರೆ, ಇಂಗ್ಲೆಂಡ್ ಗೆದ್ದರೆ, ಮಳೆ ಬಂದರೆ, ಬರದಿದ್ದರೆ, ಪ್ರವಾಸಕ್ಕೆ ಹೋದರೆ, ಹೋಗುವುದಿದ್ದರೆ, ಗುರುವಾರ ಬಂದರೆ, ಸಂಬಳದ ದಿನ, ಕ್ಲಬ್ ಸೋತರೆ, ಗೆದ್ದರೆ, ಕೊನೆಗೆ ಸೀನಿದರೂ ಕುಡೀತಾರೆ ಇಲ್ಲಿ ಜನ!! ನಾನಂತು ಇದನ್ನ ಇಲ್ಲಿಯ ರಾಷ್ಟೀಯ ಕ್ರೀಡೆ ಎನ್ನುತ್ತೇನೆ! ಅದೇನು ಹುಚ್ಚೋ?

೯.

೧೦. ಮೇಲಿನ ಎಲ್ಲವೂ, ಮತ್ತೊಂದಿಷ್ಟು ಕೂಡಿ ’ಫೇಸ್ ಬುಕ್’ ನಲ್ಲಿ ಅಪ್ ಡೇಟ್ ಮಾಡುವುದು ಇನ್ನೊಂದು ಹುಚ್ಚು. ಪ್ರೊಪೋಸ್ ಮಾಡುವುದು, ಕೈ ಕೊಡುವುದ್, ಟಾಂಟ್ ಮಾಡುವುದು, ದೋಸ್ತಿ ಮಾಡುವುದು, ಎಲ್ಲವೂ ಫೇಸ್ ಬುಕ್ ನಲ್ಲೇ!!

ಮೇಲಿನ ೯ ನೇ ಹುಚ್ಚು ಒಂಥರಾ ’ಖಾಲಿ ಜಾಗ ಭರ್ತಿ ಮಾಡಿ’ ತರಹ. ಇಲ್ಲಿ bbc ಯ ಫೀಸ್ ನಿಂದ ಪೆಟ್ರೋಲ್ ದರದ ವರೆಗೆ, ಹೀಥ್ರೂ ಏರ್ ಪೋರ್ಟ್ ನ ಐದನೆ ರನ್ ವೇ ಇಂದ ಬ್ಯಾಂಕ ಗಳಾ ಬೋನಸ್ ವರೆಗೆ - ಹೀಗೆ ಯಾವುದೇ ವಿಷಯವನ್ನ ಭರಿಸಬಹುದು!! :)

ನೀವೇನಾದರೂ ಲಂಡನ್ನಿಗೆ ಬಂದರೆ ಗಮನದಲ್ಲಿರಲಿ ಎಂದು ಸಣ್ಣ ಪ್ರಯತ್ನ.... :)

Saturday 6 June 2009

ಭಾರತ - ಪಾಕ್ ಕ್ರಿಕೆಟ್....

ಮೊನ್ನೆ ಜೂನ್ ೩ ಕ್ಕೆ ಟಿ-ಟ್ವೆಂಟಿ ವಿಶ್ವ ಕಪ್ ನ ವಾರ್ಮ್ ಅಪ್ ಪಂದ್ಯ, ಭಾರತ-ಪಾಕ್ ನಡುವೆ ಬ್ರಿಟ್ ಓವಲ್ ನಲ್ಲಿತ್ತು. ಕೊನೆಯಲ್ಲಿ ಆರಾಮಾಗಿ ಭಾರತ ಗೆದ್ದ ಈ ಪಂದ್ಯದಲ್ಲಿ, ಬರೀ ಅಭ್ಯಾಸ ಪಂದ್ಯವಾದರೂ ಹೌಸ್ ಫುಲ್ ಆಗಿದ್ದ ಸ್ಟೇಡಿಯಂನಲ್ಲಿದ್ದ ಆ ಉತ್ಸಾಹ, ಹುಮ್ಮಸ್ಸು, ಗದ್ದಲ, ಚೀರಾಟ - ಭಾರತ - ಪಾಕಿಸ್ತಾನಗಳ ನಡುವಿನ ವೈರತ್ವದ ಉದಾಹರಣೆಯಂತಿತ್ತು. It was electric!!

ಸಂಜೆ ೫.೩೦ ಕ್ಕೆ ಈ ಪಂದ್ಯವಿದ್ದರೂ ಅದಕ್ಕೂ ಮುಂಚೆ ಇದ್ದ ಹಾಲೆಂಡ್ - ಸ್ಕಾಟ್ಲೆಂಡ್ ಪಂದ್ಯದಲ್ಲೇ "ಜೀತೇಗಾ ಭೈ ಜೀತೇಗಾ...." ಮಂತ್ರ ಘೋಷಣೆಗಳು ಪ್ರಾರಂಭವಾಗಿದ್ದವು. ನೀರಸವೆನಿಸುತ್ತಿದ್ದ ಆ ಪಂದ್ಯದಲ್ಲಿ ಹಾಲೆಂಡ್ ಗೆಲುವಿನ ಹೊಸ್ತಿಲಲ್ಲಿ ಬಂದಾಗ ಅಚಾನಕ್ ಆಗಿ ಸ್ಟೇಡಿಯಂ ತುಂಬ ಗದ್ದಲ. ಪಾಪದ ಆ ಕ್ರಿಕೆಟ್ಟಿಗರೂ ಒಂದ್ಸಾರ್ತಿ ಕಣ್ಣುಜ್ಜಿಕೊಳ್ಳುವ ಪರಿಸ್ಥಿತಿ! ಯಾಕೆಂದು ನಾವು ಕಣ್ ಕಣ್ ಬಿಡಬೇಕಾದ್ರೆ ಗೊತ್ತಾಗಿದ್ದು- ದೊಡ್ಡ ಪರದೆಯಲ್ಲಿ ಧೋನಿ - ಯುವರಾಜ್ ಸಿಂಗ್ ರ ದರ್ಶನ!!! ಪಕ್ಕದಲ್ಲಿ ಕುಳಿತಿದ್ದ ಇಬ್ಬರು ಬಿಳಿಯರು ಕಕ್ಕಾ-ಬಿಕ್ಕಿ. ಒಬ್ಬ ಎದ್ದು ಇನ್ನೂ ಎರಡು ಬೀರ್ ತೊಗೊಂಡು ಬಂದ.

ಅರ್ಧ-ಬರ್ದ ಅನಿಸುತ್ತಿದ್ದ ಸ್ಟೇಡಿಯಂ, ಮ್ಯಾಚ್ ಶುರುವಾಗೋ ಹೊತ್ತಿಗೆ ಹೌಸ್ ಫುಲ್. ಗುಂಪುಗಳಲ್ಲಿ ಎರಡೂ ದೇಶಗಳ ಬೆಂಬಲಿಗರು.೫ ನೇ ಫ್ಲೋರ್ ನಲ್ಲಿದ್ದ ನಾವು, ಸುಮಾರು ೧೫ ಜನ, ಮಧ್ಯ ಸಿಕ್ಕಿಹಾಕಿಕೊಂಡಿದ್ದೆವು. ೪ ಭಾರತದ ತ್ರಿವರ್ಣ ಮತ್ತು ಭಾರತೀಯ ಕ್ರಿಕೆಟ್ಟಿನ ಶರ್ಟ್ ಹಾಕಿಕೊಂಡಿದ್ದರು ಜೊತೆಗಿದ್ದ ಗುಜರಾತಿಗಳು. ಇವ್ಯಾವೂ ಇಲ್ಲದ ನಾವು ನಾಕು ಜನ ಅವರ ಪ್ರಕಾರ under prepared to cheer. ಅವರಿಗೊಂದು ಥ್ಯಾಂಕ್ಸ್ ಹೇಳಿ ಬ್ಯಾಗಿಂದ ಪ್ಲ್ಯಾಸ್ಟಿಕ್ ಕಹಳೆ ತೆಗೆದೆವು. ಶಬ್ದಗದ್ದಲವಿಲ್ಲದ ಗುಂಪಿಗೆ ಬ್ಯಾಲನ್ಸ್ ಬಂದಿತ್ತು. ಅಕ್ಕ ಪಕ್ಕ ಬರೀ ಹಸಿರು ಟೀ-ಶರ್ಟ್ ಗಳೇ. ಒಂಟಿ ಚುಕ್ಕಿ ಹಸಿರು ಧ್ವಜಗಳೇ. ಪಕ್ಕದ ಕುರ್ಚಿಯಲ್ಲಿ ಪಾಕಿಸ್ತಾನದ ಒಂದು ಕುಟುಂಬ. ಈ ಕಡೆ ಇನ್ನೊಂದು ಮುಸ್ಲಿಮ್ ಕುಟುಂಬ. ಹಿಂದೆ ಗುಜರಾತಿಗಳು.

ಪಂದ್ಯ ಶುರುವಾಗೋ ಮೊದಲು ಶಾರೀರಿಕ ಕಸರತ್ತಿಗಿಳಿದ ಎರಡೂ ತಂಡಗಳಿಗೆ ಜಯಕಾರ ಹಾಕ್ತಿದ್ದಾರೋ ಇಲ್ಲ ಬೈತಿದ್ದಾರೋ ಎಂದು ಗೊತ್ತಾಗದ ಪರಿಸ್ಥಿತಿ. ಧೋನಿ, ಯುವರಾಜ್, ಇರ್ಫಾನ್, ಯೂಸುಫ್, ಭಜ್ಜಿ, ರೋಹಿತ್, ಇಶಾಂತ್ - ಒಬ್ಬೊಬ್ಬರಾಗಿ ಇಳಿದರು ಫೀಲ್ಡಿಗೆ. ಅಂತೆಯೇ ಅಫ್ರಿದಿ, ಮಲಿಕ, ಯುನಿಸ್, ತನ್ವಿರ್ ಗಳು ಕೂಡ. ಕೊನೆಗೂ ಶುರುವಾಯಿತು ಆಟ!

ಅದರ ಜೊತೆಗೇ ಶುರುವಾಗಿದ್ದು ಗದ್ದಲ. ಮೊದಲ ಫ್ಲೋರ್ ನಲ್ಲಿ ಮಿನಿ ಸ್ಕರ್ಟನಲ್ಲಿದ್ದವಳೊಬ್ಬ ಸುಂದರಿ ಒಂದು ಬ್ಯಾನರ್ ತೆಗೆದದ್ದೇ ತಡ, ಎರಡನೇ ಫ್ಲೋರನಲ್ಲಿದ್ದ ಪಾಕಿ ಬೆಂಬಲಿಗರಿಗೆ ಎಲ್ಲೋ ಬೆಂಕಿ ಇಟ್ಟ ಹಾಗಿತ್ತು. Q - Can Pak ever win against India in a world Cup match? A: NEVER!!. ಸತ್ಯವನ್ನೇ ಬರೆದಿದ್ದಳು ಆಕೆ. ಅಷ್ಟು ಸಾಕಗಿತ್ತು ಮೇಲಿನವರಿಗೆ. ಗಾಯದ ಮೇಲೆ ಬರೆ ಎಳೆದಂತೆ ಮೊದಲ ಓವರ್ ನಲ್ಲೇ ಒಂದು ವಿಕೆಟ್ ಬೇರೆ ಬಿತ್ತು. ಸ್ಟೇಡಿಯಂ ನಲ್ಲಿನ ಅಬ್ಬರ ಮುಗಿಲು ಮುಟ್ಟಿತ್ತು. ಹಾರುತ್ತಿದ್ದ ತ್ರಿವರ್ಣ ಕೆಳೆಗಿಳಿಯಲಿಲ್ಲ. ಮುಂದಿನ ೪ ಒವರ್ ಗಳಲ್ಲಿ ಪಾಕಿ ತಂಡ ೪೫ ರನ್ ಮುಟ್ಟಿದಾಗಲೂ! ಆದರೆ ಅಷ್ಟೊತ್ತಿಗೆ ಪಾಕಿ ಬೆಂಬಲಿಗರ ಗದ್ದಲ ಜಾಸ್ತಿ ಆಗಿತ್ತು. ಬೌಂಡರಿಯಲ್ಲಿದ್ದ ಇರ್ಫಾನ್ ರ ಪರಿಸ್ಥಿತಿ ಹೇಳತೀರದು. ಇಷ್ಟರಲ್ಲಿ ಹಿಂದೆ ಕುಳಿತಿದ್ದ ಬಿಳಿಯರು ನಾಕು ಬೀರ್ ಖಾಲಿ ಮಾಡಿ, ಮುಂದೇನು ಎಂಬ ಚಿಂತೆಯಲ್ಲಿದ್ದಂತಿತ್ತು.

ಅದಾದ ಮೇಲೆ ಯಾವಾಗ ೫ ಎಸೆತಗಳಲ್ಲಿ ೩ ವಿಕೆಟ್ ಬಿದ್ದವೋ, ನಮ್ಮ ಗದ್ದಲ ಮತ್ತೆ ಚಿಗುರಿತ್ತು. ಹಸಿರು ಟೀ-ಶರ್ಟ್ ಗಳಲ್ಲಿದ್ದವರನ್ನು ಕರೆ ಕರೆದು ಛೇಡಿಸಹತ್ತಿದ್ದರು. ಕೊನೆಗೆ ೧೫೮ ರನ್ ಗಳಾದಾಗ ಅವರ ಧ್ವನಿಯಲ್ಲಿ ಸ್ವಲ್ಪ ಜೀವ ಬಂತು.

It was turnign nasty in the stadium. ಕೊನೆಗೆ ಮೊದಲ ಫ್ಲೋರ್ ನಿಂದ ಭಾರತದ ಧ್ವಜ ಹಿಡಿದ ಒಬ್ಬ ಬಂದೇ ಬಿಟ್ಟ ಎರಡನೇ ಫ್ಲೋರ್ ಗೆ. ಒಬ್ಬನೇ. ಅಲ್ಲಿದ್ದಿದ್ದು ಸುಮಾರು ೩೦ ಜನ ಪಾಕಿಗಳು. ಅವರಿಗೆ ತಿನ್ನಲು ಕೊಟ್ಟು, ಸಮಾಧಾನ ಹೇಳುವಂತೆ ನಟಿಸಿ, ಗಾಯದ ಮೇಲೆ ಬರೆ ಎಳೆದು ಹೊರಟೇ ಹೋದ. ಅಸಹಾಯಕ ಪಾಕಿಗಳು!! ಮೇಲಿಂದ ನಾವು, ಕೆಳಗಿಂದ ಇನ್ನೊಂದು ಗುಂಪು ಕಾಡತೊಡಗಿತು.

ಅದೆಲ್ಲಿದ್ದನೂ, ಬಂದ ನನ್ನ ಸ್ನೇಹಿತನ ಆಫೀಸಿನಲ್ಲಿ ಕೆಲ್ಸ ಮಾಡುವ ಬ್ರಿಟ್-ಇಂಡಿಯನ್. ಅಲ್ಲಿ ತನಕ ನಾವಾಯಿತು ನಮ್ಮ ಗದ್ದಲವಾಯಿತು ಎಂಬತ್ತಿದ್ದ ನಮ್ಮ ಫ್ಲೋರ್ ನಲ್ಲಿ ಶುರುವಾಯಿತು ಅಬ್ಬರ. ಪಕ್ಕದಲ್ಲಿದ್ದ ಪಾಕಿ ಕುಟುಂಬ, ಅವರ ಪಕ್ಕದಲ್ಲಿದ್ದ ಇನ್ನಷ್ಟು ಪಾಕಿಗಳನ್ನ ಹರಿದು ಮುಕ್ಕಿಬಿಟ್ಟ ಮಹರಾಯ! Yo, your world cup is over man, start packing up. Why dont u sing the Pak song, come on, sing it. ಫುಲ್ ಬ್ರಿಟ್ ಆಕ್ಸೆಂಟನಲ್ಲಿ ಟಾಂಟ್ ಮಾಡುತ್ತಿದ್ದರೆ, ಒಂದು ಕ್ಷಣ ನಮಗೇ ಕರುಣೆ ಉಕ್ಕಿತ್ತು. ಕೊನೆಗೆ ಅವ ಹೊರಡಲು ಕಾರಣ ಸ್ವಲ್ಪ ಸೀರಿಯಸ್ಸಾಗಿತ್ತು! ಈ ಕಡೆ ಕುಳಿತಿದ್ದ ಇನ್ನೊಂದು ಮುಸ್ಲಿಮ್ ಕುಟುಂಬವನ್ನೂ ಬಿಡದಾದಾಗ, ಆ ಕುಟುಂಬದ ಹಿರಿಯ ಕೇಳಿದ್ದು ಒಂದೇ ಪ್ರಶ್ನೆ. ಈ ಸಲದ IPL ಗೆದ್ದಿದ್ದು ಯಾರು? ಇವ ಹೇಳಿದ ಹೈದ್ರಾಬಾದ್. ಅವ ಹೇಳಿದ ಅದು ನಮ್ಮೂರು. ನಾನಿಲ್ಲಿ ಬಂದಿರೋದು ನಿನ್ನ್ ಥರಾನೇ ಭಾರತವನ್ನು ಬೆಂಬಲಿಸಲು. ಒಂದು ಸಾರಿ ಹೇಳಿ ಹೊರಟ ಮಹಾನುಭಾವ! ಆದರೂ ಏಕೋ ನಮ್ಮಲ್ಲಿದ್ದ ಉತ್ಸಾಹ ಅವರಲ್ಲಿರಲಿಲ್ಲ.

ಭಾರತದ ಇನ್ನಿಂಗ್ಸ್ ನಮ್ಮ GDP ಥರಾನೆ ಏರಿಕೆಯಲ್ಲೇ ಇತ್ತು. ಓಪನಿಂಗ್ ಜೋಡಿ ಮಾಡಿದ ಮೋಡಿ ಮುಂದೆ ಪಾಕಿಗಳ ಸದ್ದಡಗಿತ್ತು. ನಮ್ಮ ಗದ್ದಲಕ್ಕೆ ಮಿತಿ ಇರಲಿಲ್ಲ. ಬಿಳಿಯರ ಬೀರ್ ಸೇವನೆ ಮುಂದುವರೆದಿತ್ತು. ಕೊನೆಗೆ ಆರಾಮಾಗಿ ಗೆದ್ದ ಭಾರತ ತಂಡ, ಸ್ಟೇಡಿಯಂ ಹೊರಗೆ ಕುಣಿದಾಟಕ್ಕೆ ಕಾರಣವಾಗಿತ್ತು. ಪಂದ್ಯ ಮುಗಿದಿದ್ದು ೯.೩೦ ಕ್ಕೆ ಆದರೂ, ಹೊರಗೆ ನಮ್ಮ ಗದ್ದಲ ಮುಗಿದಾಗ ೧೦.೩೦! ಮನೆಗೆ ಮುಟ್ಟಿದಾಗ ೧೧.೩೦.

ಒಟ್ಟಿನಲ್ಲಿ ಒಂದು ರೋಮಾಂಚಕ ಸಂಜೆ ಮುಗಿದಿತ್ತು! ಭಾರತ ಗೆದ್ದಿದೆ. ಹೀಗೆ ಗೆಲುವು ಮುಂದುವರೆದು ವಿಶ್ವ ಕಪ್ ನಮ್ಮಲ್ಲೇ ಉಳೀಲಿ.

Friday 22 May 2009

ಕಾಯುತಿರುವೆ...

ಮಧುರ ಮುಂಜಾವಿನಲಿ
ಕೆದರಿದ ಕೂದಲಲಿ ಆಡಿಸಲೊಂದು ಕೈಗೆ,

ಏರುತಿರುವ ಸೂರ್ಯನಡಿ
ಜೊತೆಗೂಡಿ ಅಡಿಯಿಡುವ ಪಾದಕೆ,

ತೀರ ಕೆಂಪಗಾಗುವಲ್ಲಿ
ನೀರಾಗಿ ಕೆಂಪಾಗುವ ಕೆನ್ನೆಗೆ,

ಬೆಳ್ಳಿ ಬೆಳೆದಿಂಗಳಲ್ಲಿ
ಹೆಜ್ಜೆಯಲ್ಲಿ ಹೆಜ್ಜೆಯಿರಿಸುವ ಗೆಜ್ಜೆಗೆ...

Sunday 10 May 2009

ಮುಂದೇನು ಬರುವುದು?

೫ ನೇ ತರಗತಿಯಲ್ಲಿದ್ದಾಗ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಗೆ ನಮ್ಮನ್ನೆಲ್ಲ (ಸುಮಾರು ೧೦-೧೫ ವಿದ್ಯಾರ್ಥಿಗಳು) ತಯಾರಿಸಿದವರು - ಬಿರಾದಾರ್ ಗುರುಗಳು. ಇವತ್ತಿಗೂ ನಿತ್ಯ ನೆನೆಯಬೇಕಾದ ನೆಚ್ಚಿನ ಸರ್. ಅವರು ಅಂದು ದಿನಾ ೧೦-೧೨ ತಾಸಿನ ಆ ತಾಲೀಮು ನೀಡದೇ ಇದ್ದಿದ್ದ್ರೆ, ಇವತ್ತಿಗೆ ಈ ಜಗತ್ತು ನೋಡ್ತಾ ಇರ್ಲಿಲ್ಲ. ಎಲ್ಲರನ್ನು ತಮ್ಮ ಮನೆಯಲ್ಲಿ ಕಲೆ ಹಾಕಿ, ತಾವೇ ಗೈಡ್ ತರಿಸಿ, ನಿತ್ಯ ಗಣಿತ, ಭಾಷೆ, ರೀಸನಿಂಗ್ ಇತ್ಯಾದಿ ಕಲಿಸಿ, ಪರೀಕ್ಷೆ ಹತ್ತಿರ ಬಂದಂತೆ ದಿನವೂ ಅಣುಕು ಪರೀಕ್ಷೆ ನಡೆಸಿ, ತಿದ್ದಿ, ತೀಡಿ ಕೊನೆಗೆ ಯಾವ ಮಟ್ಟಿಗೆ ತಯಾರು ಮಾಡಿದ್ದರು ಅಂದ್ರೆ, ನಾವು ಪರೀಕ್ಷೆ ಬರೆದು, ಮುಗಿಸಿ, ಕೊಟ್ಟಿದ್ದ ಪ್ರಶ್ನೆಗಳನ್ನ ಬರೆದುಕೊಂಡು ಬಂದಿದ್ದೆವು! (ಪ್ರಶ್ನೆ ಪತ್ರಿಕೆ ಹೊರ ಹೋಗಲು ಬಿಡುತ್ತಿರಲಿಲ್ಲ). ಅವರ ಆ ನಿರೀಕ್ಷೆಯನ್ನ ನಿಜ ಮಾಡಲಿಲ್ಲ ಎನ್ನುವ ಕೊರಗು ಈಗಲೂ ಇದೆ. ಆದರೆ ಆ ನಿರಾಶೆ ನಮ್ಮನ್ನ ಹತ್ತಿಕ್ಕಲು ಬಿಡದೆ, ಮತ್ತೆ ಹುರುದುಂಬಿಸಿ, ಭವಿಷ್ಯದ ಬಗ್ಗೆ ಕನಸು ಕಟ್ಟಿ, ಎತ್ತರದ ಗುರಿ ಕೊಟ್ಟು, ಅದನ್ನು ತಲುಪಲು ಏಣಿಯಂತೆ ನಮ್ಮ ಬುದ್ಧಿಯನ್ನ ತಿದ್ದಿ ಮುನ್ನುಗ್ಗಿಸಿದ ಮಹಾನುಭಾವ ಅವರು.

ಅವರ ಶಿಕ್ಷಣ ಪದ್ಧತಿಯಲ್ಲೆ ಒಂದು ಡಿಸಿಪ್ಲಿನ್ ಇತ್ತು. ಅವರಲ್ಲಿರಲಿಲ್ಲ! ಅವರಿಂದ ಕಲಿತಿದ್ದು ಒಂದೆ, ಎರಡೆ? ಕಠಿಣವಾದ ಇಂಗ್ಲಿಷ್ ನಿಂದ, ವ್ಯಾಕರಣ, ಗಣಿತ, ದುಂಡಗಿನ (?) ಕೈ ಬರಹ, ರೀಸನಿಂಗ್, ಕೊನೆಗೆ ಕಬಡ್ಡಿ, ಖೊ ಖೊ ವರೆಗೆ! ಬರಿ ಹೊಲದ ಬದದ ಮೇಲಿನ ಮಣ್ಣಿನ ಗುಡ್ಡೆಯಂತಿದ್ದ ನಮ್ಮನ್ನೆಲ್ಲ ಹದ ಮಾಡಿ, ಈ ಜಗತ್ತಿಗೆ ಮುಂದಡಿಯಿಡಿಸಿದ ಕುಂಬಾರ ಅವರು.

ರೀಸನಿಂಗ್ ನಲ್ಲಿ ಒಂದು ಭಾಗ - ಮುಂದೇನು ಬರುವುದು? - ೪ ಚಿತ್ರಗಳನ್ನು ಕೊಟ್ಟು ಐದನೇದನ್ನು ಊಹಿಸುವುದು ಇದರ ತಿರುಳು. ಪರೀಕ್ಷೆಯ ದೃಷ್ಟಿಯಿಂದಷ್ಟೇ ಅಲ್ಲದೆ, ಜೀವನದಲ್ಲೂ ಅಳವಡಿಸಿಕೊಳ್ಳಬಹುದಾದ, pattern ಗುರ್ತಿಸಲು ಪ್ರೇರೇಪಿಸಿದ ಪಾಠ ಇದು. ಇಂತಹ ಅನೇಕ ವಿಷಯಗಳ ಬಗ್ಗೆ ಆ ಚಿಕ್ಕ ವಯಸ್ಸಿನಲ್ಲಿಯೇ ನಮಗೆ ಭದ್ರ ಬುನಾದಿ ಹಾಕಿ ಕೊಟ್ಟ ಬಿರಾದಾರ್ ಸರ್ ನಮಗೆಲ್ಲ ಪ್ರಾತಃಸ್ಮರಣೀಯರು.

ಬಿರಾದಾರ್ ಸರ್ ನಮ್ಮೂರಿಗೆ ವರ್ಗವಾಗಿ ಬಂದಿದ್ದು, ನಾನು ೪ ನೇ ತರಗತಿಯಲ್ಲಿದ್ದಾಗ, ೧೯೯೧ ರಲ್ಲಿ. ಅಲ್ಲಿಂದೀಚಿಗೆ ಅವರ ಗರಡಿಯಲ್ಲಿ ನೂರಾರು ಇಂಜಿನಿಯರ್ ಗಳು, ವೈದ್ಯರು, ಶಿಕ್ಷಕರು, MBA ಆದವರು, ಕೃಷಿಕರು, ಆಡಳಿತಗಾರರು ತಯಾರಾಗಿದ್ದಾರೆ. ತನ್ನ ಗದ್ದೆಯಲ್ಲಿ ಬೆಳೆಯುವ ಪ್ರತಿ ಪೈರೂ ಅಷ್ಟೆ ಉನ್ನತ ಬೆಳೆ ತೆಗೆಯಬೇಕೆಂದು ಹಂಬಲಿಸುವ ರೈತನಂತೆ ಬಿರಾದಾರ್ ಸರ್ ಇವತ್ತಿಗೂ ತಮ್ಮ ಶೈಕ್ಷಣಿಕ ಕೃಷಿ ನಡೆಸುತ್ತಿದ್ದಾರೆ, ಅದೇ ತಿಳವಳ್ಳಿಯಲ್ಲಿ. ಯಾವುದೇ ವಿದ್ಯಾರ್ಥಿ ಏನೇ ಆಗುವ ಮೊದಲು ಒಬ್ ಒಳ್ಳೆಯ, ಜವಾಬ್ದಾರಿಯುತ ನಾಗರೀಕನಾಗುವಂತೆ ಪ್ರೇರೇಪಿಸುವುದು ಅವರ ಈ ಯಶಸ್ಸಿಗೆ ಮೂಲ ಕಾರಣ ಎಂದು ನನ್ನ ಅನಿಸಿಕೆ.

ಅವರ ಕುಟುಂಬವೇ ಈ ಶಿಕ್ಷಣ ಕೃಷಿಗೆ ನಿಂತಿದೆ. ಅವರ ಮನೆಯವರು (ನಮ್ಮ ನೆಚ್ಚಿನ ಬಿರಾದಾರ್ ಮೇಡಮ್), ಅಳಿಯ ಬಸಣ್ಣ, ಹೀಗೆ ಎಲ್ಲರೂ ’ಕುಂಬಾರರೆ ಮತ್ತು ಅವರಲ್ಲಿ ಕಲಿತ ಎಲ್ಲ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಿದವರೇ ಮತ್ತು ಬೀರುತ್ತಿರುವವರೇ. ಮುತ್ತಿನಂಥ ಮೂರು ಮಕ್ಕಳು - ಇಬ್ಬರು ಇಂಜಿನಿಯರ್ ಗಳು ಮತ್ತೊಬ್ಬಾಕೆ ಡಾಕ್ಟರ್. ತುಂಬಿದ ಕೊಡ, ತುಂಬು ಕುಟುಂಬ.

ಬಿರಾದಾರ್ ಸರ್, ನಿಮ್ಮ ಈ ಶೈಕ್ಷಣಿಕ ತಪಸ್ಸು, ಕೃಷಿ ಹೀಗೇ ಮುಂದುವರೀಲಿ. ನಿಮ್ಮಿಂದ ಮತ್ತೂ ಸಾವಿರಾರು ಹೂವುಗಳರಳಲಿ. ಸಮಾಜಕ್ಕೆ ಮತ್ತಷ್ಟು ಒಳ್ಳೆ ನಾಗರಿಕರಲು ಸಿಗಲಿ. ನಮನ ಸರ್....

Thursday 26 March 2009

ಉಗಾದಿ..

ಚೈತ್ರದ ಚಿಗುರು
ತೆನೆಯೊಡೆದ ಭತ್ತ
ಬಲಿತ ಮಾವು
ಫಲಿತ ಫಸಲು... ಬೆಲ್ಲ

ಶುರುವಾದ ಸುಡು ಬೇಸಗೆ
ಗಾಳಿ-ಧೂಳು
ಬಾವಿ ತಳ... ಬೇವು

ಅದು ಜೀವನ
ಇದುವೂ ಜೀವನ
ಎರಡರ ಮಧ್ಯ ಅಲ್ಲ-
ಎರಡರ ಮಿಶ್ರಣ, ಜೀವನ

ಹಿಂದಿನ ಬೇವಿನ ಕಲಿಕೆ
ನಾಳಿನ ಬಲ
ಬೆಲ್ಲದ ಒಲವು
ರವಿಕಿರಣ
ಎರಡೂ ಕಲೆತ ಇಂದು.... ಉಗಾದಿ...

Sunday 22 March 2009

ಹಳೆ ಪಾತ್ರೆ, ಹಳೆ ಕಬ್ಬಣ ಮತ್ತು emosanal ಅತ್ಯಾಚಾರ್!!

ಇತ್ತೀಚಿಗೆ ಊರಿಗೆ ಹೋದಾಗ ಎಲ್ಲೆಲ್ಲೂ ಕೇಳಿದ ಕನ್ನಡ ಹಾಡು - ಹಳೆ ಪಾತ್ರೆ, ಹಳೆ ಕಬ್ಬಣ, ಹಳೆ ಪೇಪರ್ ತರಹಾ ಈ... ಪರ-ವಿರೋಧಿ ವಾದಗಳನ್ನು ಕೆರಳಿಸಿದ ಈ ಹಾಡು, ನಮ್ಮೂರಲ್ಲಿ ತುಂಬಾ ಪ್ರಸಿದ್ಧಿ ಪಡೆದಂತಿತ್ತು. ಸಾಹಿತಿ ಯೋಗರಾಜ್ ಭಟ್ ನಮ್ಮೂರಿನ ಹುಡುಗ ಎನ್ನುವುದಕ್ಕಿಂತಲೂ, ಮುಂಗಾರು ಮಳೆ ಯಶಸ್ಸಿನ ನಂತರ ಆತ ತಿಳವಳ್ಳಿಯ (ಅವರು ಹುಟ್ಟಿ ಬೆಳೆದ ಊರ, ಹಾವೇರಿ ಜಿಲ್ಲೆಯಲ್ಲಿದೆ) ಹೆಸರು ಎತ್ತದೇ ತಾನು ಕುಂದಾಪುರದ ಬಳಿಯವರು ಎಂದಿದ್ದು ಮತ್ತು, ಈ ಸಾಹಿತ್ಯಕ್ಕೆ ಸಿಕ್ಕ ವ್ಯಾಪಕ ನೆಗೆಟಿವ್ ಪ್ರಚಾರ, ಎರಡೂ ಸೇರಿ ಅವರನ್ನು ಆಡಿಕೊಳ್ಳಲು ಉಪಯೋಗಿಸಲ್ಪಟ್ಟಿತ್ತು ಈ ಹಾಡು!

ಭಟ್ಟರ ಹುಡುಗ ಹದಗೆಟ್ಟ ಹೋಗ್ಯಾನ!! ಎಂಥಾ ಮನಿ ಹುಡುಗ ಇಂಥಾ ಹಾಡು ಬರೀತಾನ್ ಅನ್ಸಿರ್ಲಿಲ್ಲ ಬಿಡ್ರಿ ಅನ್ನೋದು ಸಾಮಾನ್ಯವಾಗಿತ್ತು. ಆದರೂ ಜನ ಗುನುಗುನಿಸ್ತಾ ಇದ್ದಿದ್ದು ಇದೇ ಹಾಡು! ಕನ್ನಡ ಸಾಹಿತ್ಯಿಕ ವೆಬ್ ತಾಣಗಳಲ್ಲೂ ಇದರ ಪರ-ವಿರೋಧಿ ಚರ್ಚೆಗಳಾದವು. ಹಿರಿ ನಟ ರಾಜೇಶ್ ಇದನ್ನ ಪ್ರಬಲವಾಗೇ ಖಂಡಿಸಿ ಖೇದ ವ್ಯಕ್ತಪಡಿಸಿದ್ದರು. ಅದೇ ಸಮಯಕ್ಕೆ ಪರವಾಗಿಯೂ ವಾದಗಳು ಅನೇಕ ಬ್ಲಾಗ್ ಗಳಲ್ಲಿ ಪ್ರಕಟವಾದವು.

ಅದೇನೆ ಇರಲಿ, ಒಂದು ಚಿತ್ರ ಸಾಹಿತ್ಯ ಇಷ್ಟರ ಮಟ್ಟಿಗೆ ಚರ್ಚೆಗೆ ಗ್ರಾಸವಾಗುವಂತೆ ಮಾಡಿದ್ದು ಯೋಗರಾಜ್ ರ ಸಾಧನೆಯೇ! ಅವರ ಸಾಹಿತ್ಯಕ್ಕೆ ಬೇಡಿಕೆಯೂ ಹೆಚ್ಚಿದೆಯಂತೆ.

ಇದನ್ನ ಬರಿ ಕನ್ನಡ ಚಿತ್ರ ಸಾಹಿತ್ಯದ ಪರಿಧಿಯಲ್ಲಿ ನೋಡದೆ, ಮತ್ತು ಬರಿ ಇದರ ಬಗ್ಗೆ ಬರೆಯದೆ, ಇದು ಹುಟ್ಟು ಹಾಕಿದ ಈ ಮಂಥನವನ್ನು ಇನ್ನೊಂದು ಮಜಲಿನಿಂದ ನೋಡಬೇಕೆನ್ನಿಸಿದ್ದು, ದೇವ್ - ಡಿ ಎಂಬ ಹೊಸ ಹಿಂದಿ ಚಿತ್ರದ ಮತ್ತೊಂದು ತುಂಬಾ ಪ್ರಸಿದ್ಧವಾದ ಹಾಡು ಕೇಳಿದಾಗ. ತೇರಾ emosanal ಅತ್ಯಾಚಾರ್ ಎನ್ನುವ ಈ ಹಾಡಿನ ಸಾಹಿತ್ಯ ಎಷ್ಟು ಕಚಡವಾಗಿದೆಯೆನ್ನುವುದು, bol, bol why did you ditch me, whore, ಎನ್ನುವ ಸಾಲಿಂದ ತಿಳಿಬಹುದು.

ಹಿಂದಿ ಭಾಷಿಕರ ಸಂಖ್ಯೆ ಜಾಸ್ತಿ ಇರಬಹುದು. ಆ ಭಾಷೆಯ ವ್ಯಾಪ್ತಿ ಜಾಸ್ತಿ ಇರಬಹುದು. ಆದರೆ, ಎಲ್ಲೂ ಈ ಸಾಹಿತ್ಯದ ಬಗೆ, ಇದು ನಮ್ಮ ಸಂಸ್ಕೃತಿಯನ್ನು ಕೆಡಿಸುವ ಬಗ್ಗೆ ಅಥವಾ ಈ ಸಾಹಿತ್ಯದಿಂದ ಮಕ್ಕಳ, ಯುವಕರ ಮೇಲೆ ಆಗಬಹುದಾದ ದುಷ್ಪರಿಣಾಮದ ಮೇಲೆಯಾಗಲಿ ಯಾವುದೇ ರೀತಿಯ ಚರ್ಚೆ, ಕಾಮೆಂಟ್ ಕೇಳಿಲ್ಲ/ಓದಿಲ್ಲ. ಅದೇ ಒಂದು ಕನ್ನಡದ, ಇದೇ mode ನಲ್ಲಿರುವ ಹಳೆ ಪಾತ್ರೆ ಹುಟ್ಟು ಹಾಕಿದ ಆ ಚರ್ಚೆ, ಕನ್ನಡದಲ್ಲಿ, ಕರ್ನಾಟಕದಲ್ಲಿ ಇನ್ನೂ ಆ ಕಳಕಳಿ, ಪ್ರಭುದ್ಧತೆ ಇದೆ ಎನ್ನುವುದನ್ನು ಸಾಬೀತು ಪಡಿಸಿದೆ ಎನ್ನುವುದು ನನ್ನ ಅಭಿಪ್ರಾಯ.

ಸಾಹಿತ್ಯವನ್ನು ಪಕ್ಕಕ್ಕಿಟ್ಟು ನೋಡಿದರೆ, ಎರಡೂ ಹಾಡುಗಳು catchy ಸಂಗೀತ ಹೊಂದಿವೆ. ಹಾಗಾಗಿ ನಂಗೆ ಇವೆರಡೂ ಇಷ್ಟ!!